ಬೆಳಗಾವಿ : ಕನ್ನಡ ಪರ ಹೋರಾಟಗಾರ ಹಾಗೂ ಹಿರಿಯ ಪತ್ರಕರ್ತ ರಾಘವೇಂದ್ರ ಜೋಶಿ(78) ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ರಾಘವೇಂದ್ರ ಜೋಶಿ ಅವರು ಇಂದು ಮುಂಜಾನೆ ವಾಕಿಂಗ್ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದಂತೆ ಕುಸಿದು ಬಿದ್ದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. “ನಿರ್ಭೀತ” ವಾರಪತ್ರಿಕೆ ಹಾಗೂ “ನಾಡೋಜ” ಎಂಬ ದಿನ ಪತ್ರಿಕೆಯನ್ನು ಪ್ರಾರಂಭಿಸಿದ್ದ ಜೋಶಿ ಅವರಿಗೆ ಪ್ರತಿಷ್ಠಿತ ಮೋರೆ ಹನುಮಂತರಾವ್ ಪ್ರಶಸ್ತಿ ದೊರಕಿದ್ದು, ಗಡಿ ಜಿಲ್ಲೆಯಲ್ಲಿ ಕನ್ನಡಿಗರಿಗೆ ಮರಾಠಿಗರಿಂದ ತೊಂದರೆ ಉಂಟಾದಾಗಲೆಲ್ಲಾ ದಿವಂಗತ ತೊಪ್ಪಣ್ಣವರ್(ಕನ್ನಡಮ್ಮ ದಿನಪತ್ರಿಕೆಯ ಸಂಪಾದಕ) ಹಾಗೂ ರಾಘವೇಂದ್ರ ಜೋಶಿ ಅವರು ಹೋರಾಟದಲ್ಲಿ ತೊಡಗುತ್ತಿದ್ದರು. ಮೃತರ ಅಂತ್ಯಕ್ರಿಯೆಯನ್ನು ಇಂದು ಸಂಜೆ 5 ಗಂಟೆಗೆ ಹಿಂದವಾಡಿಯ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳಿಂದ ತಿಳಿದು ಬಂದಿದೆ.










