ಗೋ ಕಳ್ಳರನ್ನು ಸರ್ಕಲಲ್ಲಿ ನಿಲ್ಲಿಸಿ ಗುಂಡಿಕ್ಕಬೇಕು: ಮಂಕಾಳ ವೈದ್ಯ ಕಿಡಿ.

25

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಗೋವು ಮತ್ತು ಜಾನುವಾರುಗಳ ಕಳ್ಳತನ, ಹತ್ಯೆ, ಕ್ರೌರ್ಯಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಸೋಮವಾರ ಭಾಗವಹಿಸಿ ಮಾತನಾಡಿದ ಅವರು, ಗೋ ಕಳ್ಳತನ, ಹತ್ಯೆ ಮಾಡುವವರನ್ನು ಸರ್ಕಲ್‍ನಲ್ಲಿ ನಿಲ್ಲಿಸಿ ಸಾರ್ವಜನಿಕವಾಗಿ ಗುಂಡಿಕ್ಕಬೇಕು ಎಂದು ಹೇಳಿದ್ದಾರೆ. ನಾವು ಪೂಜೆ ಮಾಡುವ ಪ್ರಾಣಿ ಗೋವು. ಅದನ್ನು ನಾವು ಬಹಳ ಪ್ರೀತಿಯಿಂದ ಸಾಕುತ್ತೇವೆ. ಅದರ ಹಾಲನ್ನು ಕುಡಿದು ನಾವು ಬದುಕುತ್ತಿದ್ದೇವೆ. ಪೊಲೀಸ್ ಇಲಾಖೆಯವರಿಗೆ ನೇರವಾಗಿ ಹೇಳಿದ್ದೇನೆ. ಅವರು, ಇವರು ಎಂದು ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ. ಅಷ್ಟಾಗಿಯೂ ಕ್ರೌರ್ಯ ಮುಂದುವರಿದರೆ, ಗೋ ಕಳ್ಳರನ್ನು ರಸ್ತೆಯಲ್ಲಿ ಸರ್ಕಲಲ್ಲಿ ನಿಲ್ಲಿಸಿ ಗುಂಡು ಹಾರಿಸುವಂತೆ ಪೊಲೀಸರಿಗೆ ಆದೇಶ ಮಾಡುತ್ತೇನೆ ಎಂದು ಮಂಕಾಳ ವೈದ್ಯ ಕಿಡಿಕಾರಿದ್ದಾರೆ.