ಬೆಂಗಳೂರು: ನಾನು ಗೌರವ ಡಾಕ್ಟರೇಟ್ ಪದವಿಯನ್ನು ತುಂಬಾ ಸಂತೋಷದಿಂದ ಸ್ವೀಕರಿಸಿದ್ದೇನೆ ಎಂದು ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಹೇಳಿದ್ದಾರೆ.
ಸೆಂಟ್ರಲ್ ಕಾಲೇಜು ಆವರಣದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಬೆಂಗಳೂರು ವಿಶ್ವವಿದ್ಯಾಲಯದ 58ನೇ ವಾರ್ಷಿಕ ಘಟಿಕೋತ್ಸವದಲ್ಲಿ ಮಾಜಿ ಪಿಎಂ ಹೆಚ್ ಡಿ ದೇವೇಗೌಡ, ಇಸ್ರೋದ ಅಧ್ಯಕ್ಷ ಸೋಮನಾಥ್ ಅವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.
ಗೌರವ ಡಾಕ್ಟರೇಟ್ ಪ್ರದಾನ ಸ್ವೀಕರಿಸಿದ ಬಳಿಕ ಮಾತನಾಡಿದ ಹೆಚ್ಡಿಡಿ, ಬೆಂಗಳೂರು ವಿವಿ ಲಕ್ಷಾಂತರ ವಿದ್ಯಾರ್ಥಿಗಳ ಜ್ಞಾನ ಭಂಡಾರ. ಉನ್ನತ ಶಿಕ್ಷಣದಲ್ಲಿ ಉತೃಷ್ಕೃತೆಯನ್ನು ಸಾಧಿಸಿದೆ. ಈ ವಿವಿ ಬಗ್ಗೆ ನನಗೆ ಅಪಾರ ಗೌರವ ಇದೆ. ವಿದ್ಯೆ ಕಾಗದದ ಸರ್ಟಿಫಿಕೇಟ್ ಆಗಬಾರದು. ವಿದ್ಯೆ ಸಂಸ್ಕಾರವನ್ನು ಒಳಗೊಂಡಿರಬೇಕು ಎಂದು ಹೇಳಿದರು.
ಶಿಕ್ಷಣ ಪುಸ್ತಕ ಜ್ಞಾನ, ಅಕ್ಷರ ಜ್ಞಾನ ಮಾತ್ರ ಅಲ್ಲ ವಿದ್ಯೆ ಹೃದಯವಂತಿಕೆ ಬೆಳೆಸಬೇಕು. ವಿದ್ಯಾರ್ಥಿ ಜೀವನ ತಪ್ಪಸ್ಸು ಇದ್ದಂತೆ. ವಿದ್ಯೆ ಒಬ್ಬನ ಜೀವನ ಕಟ್ಟಿಕೊಳ್ಳುವುದು ಮಾತ್ರವಲ್ಲ, ದೇಶವನ್ನು ಸಮಾಜವನ್ನು ಕಟ್ಟುತ್ತದೆ. ಪ್ರಸ್ತುತ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣದ ಅಗತ್ಯ ಹೆಚ್ಚಿದೆ ಎಂದು ತಿಳಿಸಿದರು.
ಇದೇ ವೇಳೆ ಇಸ್ರೋ ಅಧ್ಯಕ್ಷ ಸೋಮನಾಥ್ ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ. ಸೋಮನಾಥ್ ಅವರಿಗೆ ಗೌರವ ಡಾಕ್ಟರೇಟ್ ಸಂದಿರುವುದು ಸಂತಸ ತಂದಿದೆ. ಇಸ್ರೋದ ಸಂಸ್ಥೆ ಇಂದು ಬಾಹ್ಯಕಾಶ ಕ್ಷೇತ್ರ ಭೂಪಟದಲ್ಲಿ ವಿಶ್ವಕ್ಕೆ ಪರಿಚಯ ಮಾಡಿ ಗೌರವ ತಂದಿದೆ ಎಂದರು.










