ಚಿಕ್ಕಮಗಳೂರು – ಶೃಂಗೇರಿ ಮಾರ್ಗ ಮಧ್ಯೆ ರಾಜ್ಯ ಹೆದ್ದಾರಿ ಬಿರುಕು- ಆತಂಕದಲ್ಲಿ ವಾಹನ ಸವಾರರು…

304
firstsuddi

ಚಿಕ್ಕಮಗಳೂರು -ಶೃಂಗೇರಿ ಮಾರ್ಗ ಮಧ್ಯೆ ರಾಜ್ಯ ಹೆದ್ದಾರಿ ಬಿರುಕು ಬಿಟ್ಟಿದ್ದು ವಾಹನ ಸವಾರರು ಹಾಗೂ ಸ್ಥಳಿಯರಲ್ಲಿ ಆತಂಕ ಮೂಡಿದೆ. ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಬಳಿಯ ಇಟ್ಟಿಗೆ-ಸೀಗೋಡು ಗ್ರಾಮದಲ್ಲಿ ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಯವರೆಗೂ ಭೂಮಿ ಬಿರುಕು ಬಿಟ್ಟಿದ್ದು ಜಯಪುರ, ಕೊಪ್ಪ, ಶೃಂಗೇರಿ ಸೇರಿದಂದೆ ಈ ಭಾಗದಲ್ಲಿ ಸಂಚರಿಸುವ ಜನರಲ್ಲಿ ಭಯ ಹುಟ್ಟಿದೆ. ಇಟ್ಟಿಗೆ ಸೀಗೋಡು ಗ್ರಾಮದ ಶಿವನಗರದಲ್ಲಿ ವ್ಯಕ್ತಿಯೊಬ್ಬರು ಮನೆ ನಿರ್ಮಾಣಕ್ಕಾಗಿ ಬೋರ್‍ವೆಲ್ ಕೊರಿಸುವ ವೇಳೆ ರಸ್ತೆಯಲ್ಲಿ ಬಿರುಕು ಬಂದಿದೆ. ಬಾಳೆಹೊನ್ನೂರು, ಕೊಪ್ಪ, ಜಯಪುರ, ಶೃಂಗೇರಿ ಸೇರಿದಂತೆ ಹತ್ತಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಏಕೈಕ ಮಾರ್ಗ ಇದೇ ಆಗಿದೆ. ರಸ್ತೆ ಬಿರುಕು ಬಿಟ್ಟಿರೋದ್ರಿಂದ ರಸ್ತೆ ಮೇಲೆ ಸರಕು ಸಾಗಿಸುವ ಘನವಾಹನಗಳು ಸಂಚರಿಸಿದಲ್ಲಿ ಭೂಮಿ ಕುಸಿಯುವ ಆತಂಕ ಸ್ಥಳಿಯರದ್ದು. ಒಂದು ವೇಳೆ ಈ ಮಾರ್ಗ ಬಂದ್ ಆದಲ್ಲಿ ಚಿಕ್ಕಮಗಳೂರು-ಕೊಪ್ಪ-ಶೃಂಗೇರಿ ಮಾರ್ಗವೂ ಬಂದ್ ಆಗಲಿದ್ದು, ಹತ್ತಾರು ಕಿ.ಮೀ. ಸುತ್ತಿಕೊಂಡು ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಲಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ಇತ್ತ ಗಮನ ಹರಿಸಿ ರಸ್ತೆ ಸಾಮರ್ಥ್ಯದ ಬಗ್ಗೆ ಪರಿಶೀಲನೆ ನಡೆಸಬೇಕೆಂದು ಸ್ಥಳಿಯರು ಆಗ್ರಹಿಸಿದ್ದಾರೆ.