ವಿಜಯಪುರ: ನಿನ್ನೆ ರಾತ್ರಿ ನಾಟಕ ಪ್ರದರ್ಶನ ಮಾಡುವ ವೇಳೆ ರಂಗ ವೇದಿಕೆಯಲ್ಲೇ ಕುಸಿದು ಬಿದ್ದು ಯುವ ಕಲಾವಿದ ಸಾವನ್ನಪ್ಪಿರುವ ಘಟನೆ ನಡೆದಿದೆ. ಕುಸಿದು ಬೀಳುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.
ಜಿಲ್ಲೆಯ ತಿಕೋಟಾ ತಾಲೂಕಿನ ಕೋಟ್ಯಾಳ ಗ್ರಾಮದಲ್ಲಿ ನಿನ್ನೆ ಕೋಟ್ಯಾಳ ಗ್ರಾಮ ದೇವತೆ ಮುಕ್ತಾಕರ ದೇವರ ಜಾತ್ರೆಯ ನಿಮಿತ್ತ ನಾಟಕ ಪ್ರದರ್ಶನ ಮಾಡಲಾಗಿತ್ತು. ರಾತ್ರಿ ನಾಟಕ ಪ್ರದರ್ಶನ ಮಾಡುವ ವೇಳೆ ನಾಟಕದಲ್ಲಿ ಹಾಸ್ಯಪಾತ್ರ ಮಾಡಿದ್ದ ಶರಣು ಬಾಗಲಕೋಟೆ(28) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಶರಣು ಬಾಗಲಕೋಟೆ ಅಂಚೆ ಇಲಾಖೆಯಲ್ಲಿ ಪೋಸ್ಟ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ. ‘ಹಳ್ಳಿ ಹುಲಿ ಕೊಟ್ಟ ಬೆಳ್ಳಿ ಕಾಲುಂಗುರ’ ಎಂಬ ನಾಟಕ ಪ್ರದರ್ಶನದ ವೇಳೆ ದುರಂತ ಸಂಭವಿಸಿದೆ. ಶರಣು ಸಾವಿಗೀಡಾದ ಕಾರಣ ನಾಟಕ ಪ್ರದರ್ಶನ ರದ್ದು ಮಾಡಲಾಯಿತು.
ಈ ಸಂಬಂಧ ತಿಕೋಟಾ ಪೊಲೀಸ್ ಠಾಣೆಯಲ್ಲಿ ಸಹಜ ಸಾವು ಪ್ರಕರಣ ದಾಖಲಾಗಿದೆ.










