ಚಿಕ್ಕಬಳ್ಳಾಪುರ: ಪತ್ನಿ ಮತ್ತು ಅತ್ತೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೋರ್ವ ಫೇಸ್ ಬುಕ್ ಲೈವ್ ಮಾಡಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ 17ನೇ ವಾರ್ಡ್ನಲ್ಲಿ ನಡೆದಿದೆ.
ವೆಂಕಟೇಶ್ ತನ್ನ ಪತ್ನಿ ಶಿಲ್ಪಾ ಮತ್ತು ಅತ್ತೆ ಅಶ್ವತ್ಥಮ್ಮ, ನೀನು ಸತ್ತೋಗು, ನೀನು ಬದುಕಿದ್ದರೆ ನಮಗೆ ನೆಮ್ಮದಿಯಿಲ್ಲ ಎಂದು ಹೀಯಾಳಿಸುತ್ತಿದ್ದರು. ಜೊತೆಗೆ ಗಂಡ ವೆಂಕಟೇಶನನ್ನು ತೊರೆದು ಪತ್ನಿ ಶಿಲ್ಪಾ ತವರುಮನೆ ಸೇರಿದ್ದಳು. ಈ ಹಿನ್ನಲೆ ಇವರ ಕಿರುಕುಳದಿಂದ ಸಾಯಲು ನಿರ್ಧರಿಸಿದ್ದೇನೆ ಎಂದು ವೆಂಕಟೇಶ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಇನ್ನು ಈ ಘಟನೆ ಕುರಿತು ಮೃತನ ತಾಯಿ ಮಂಜುಳ ಎಂಬುವವರು ಚಿಕ್ಕಬಳ್ಳಾಪುರ ನಗರ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ತನಿಖೆ ಆರಂಭಿಸಿದ್ದಾರೆ.










