ಬೆಳಗಾವಿ: ವಿದ್ಯುತ್ ತಂತಿ ತಗುಲಿ ತಂದೆ ಮತ್ತು ಮಗ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಉಡಿಕೇರಿ ಗ್ರಾಮದಲ್ಲಿ ನಡೆದಿದೆ.
ಮೃತ ದುರ್ದೈವಿಗಳನ್ನು ಪ್ರಭು ಹುಂಬಿ (69) ಮತ್ತು ಪುತ್ರ ಮಂಜುನಾಥ (35) ಎಂದು ಗುರುತಿಸಲಾಗಿದೆ. ಮನೆಯ ಮುಂದೆ ಬಿದ್ದಿದ್ದ ಕಸವನ್ನು ತೆಗೆಯಲು ಹೋದಾಗ ನೆಲದ ಮೇಲೆ ಬಿದ್ದಿದ್ದ ವಿದ್ಯುತ್ ತಂತಿ ತಗುಲಿದೆ. ಮೊದಲು ತಂದೆಗೆ ವಿದ್ಯುತ್ ತಂತಿ ತಗುಲಿದೆ. ಇದನ್ನು ನೋಡಿದ ಮಗ ಮಂಜುನಾಥ ಅವರು ತಂದೆಯನ್ನು ಕಾಪಾಡಲು ಮುಂದಾದಾಗ ಅವರಿಗೂ ಸಹ ವಿದ್ಯುತ್ ತಗುಲಿ ಇಬ್ಬರೂ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಭು ಅವರು ಸ್ಥಳದಲ್ಲೇ ಮೃತಪಟ್ಟಿದ್ದು, ಮಂಜುನಾಥ ಅವರನ್ನು ಆಸ್ಪತ್ರೆಗೆ ದಾಖಲಿಸಿದ ಕೆಲವೇ ನಿಮಿಷಗಳಲ್ಲಿ ಕೊನೆಯುಸಿರೆಳೆದರು. ಮೃತರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.










