ಮೂಡಿಗೆರೆ: ಎರಡು ವರ್ಷಗಳ ಹಿಂದೆ ಮದುವೆಯಾದ ವಿವಾಹಿತ ಮಹಿಳೆ ಅನ್ಯಕೋಮಿನ ಯುವಕನ ಜೊತೆ ಪರಾರಿಯಾಗಿರುವ ಘಟನೆ ತಾಲೂಕಿನ ಬಣಕಲ್ ಗ್ರಾಮದಲ್ಲಿ ನಡೆದಿದೆ. ಕಳೆದ 2 ವರ್ಷಗಳ ಹಿಂದೆ ಮದುವೆಯಾಗಿದ್ದ 22 ವರ್ಷದ ರಮ್ಯ (ಹೆಸರು ಬದಲಿಸಲಾಗಿದೆ) ಬಣಕಲ್ ಗ್ರಾಮದ ಆಶಿಕ್ ಎಂಬ ಯುವಕನ ಜೊತೆ ಎಸ್ಕೇಪ್ ಆಗಿದ್ದಳು. ಅವರು ಕೇರಳ ಹೋಗಿದ್ದರು. ಪತ್ನಿ ನಾಪತ್ತೆಯಾಗುತ್ತಿದ್ದಂತೆ ರಮ್ಯ ಪತಿ ಬಣಕಲ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಬಣಕಲ್ ಪೊಲೀಸರು ನಾಪತ್ತೆಯಾದವಳ ಹಿಂದೆ ಬಿದ್ದಿದ್ದರು. ಇದೀಗ ಇಬ್ಬರು ಕೇರಳದಲ್ಲಿ ಪತ್ತೆಯಾಗಿದ್ದು ಬಣಕಲ್ ಪೊಲೀಸರು ಕೇರಳದಿಂದ ಇಬ್ನರನ್ನೂ ಕರೆತಂದಿದ್ದಾರೆ. ಬಣಕಲ್ ಪೊಲೀಸ್ ಠಾಣೆ ಮುಂದೆ ನೂರಾರು ಹಿಂದೂ ಸಂಘಟನೆ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಜಮಾಯಿಸಿದ್ದು ಅನ್ಯಕೋಮಿನ ಯುವಕನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಸಂಘಟಕರು ಹಾಗೂ ಗ್ರಾಮಸ್ಥರು ಪೊಲೀಸ್ ಠಾಣೆ ಬಳಿ ಬರುತ್ತಿದ್ದಂತೆ ಬಣಕಲ್ ಪೊಲೀಸರು ಸ್ಟೇಷನ್ ಗೇಟ್ ಹಾಕಿದ್ದರು. ಪೊಲೀಸ್ ಠಾಣೆಯ ಗೇಟ್ ಹಾಕಿದ್ದಕ್ಕೆ ಹಿಂದೂ ಸಂಘಟನೆಗಳು ಪೊಲೀಸರ ವಿರುದ್ಧ ಅಸಮಾಧಾನ ಹೊರಹಾಕಿ ಕಡೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 173ನ್ನ ಬಂದ್ ಮಾಡಿ ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದರು. ರಸ್ತೆ ತಡೆ ನಡೆಸಿದ ಸಂಘಟನೆಗಳು ಹಾಗೂ ಗ್ರಾಮಸ್ಥರ ಮನವೊಲಿಸಲು ಪೊಲೀಸರ ಹರಸಾಹಸಪಟ್ಟರು. ಅಂತಿಮವಾಗಿ
ಎಲ್ಲರನ್ನೂ ಠಾಣೆ ಮುಂಭಾಗಕ್ಕೆ ಮಾತ್ರ ಬಿಡುವ ಭರವಸೆ ನೀಡಿದ್ದರಿಂದ ಪ್ರತಿಭಟನಾಕಾರರು ಮುಷ್ಕರವನ್ನ ಹಿಂಪಡೆದರು. ಅನ್ಯಕೋಮಿನ ಯುವಕ ಆಶಿಕ್ ವಿರುದ್ಧ ಹಿಂದೂ ಸಂಘಟನೆಗಳು, ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಬಣಕಲ್ ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದಂತಿರೋ ವಾತಾವರಣವಿದ್ದು ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದಾರೆ.










