ಶರಣಾದ ನಕ್ಸಲರು ಬಳಸುತ್ತಿದ್ದ ಶಸ್ತ್ರಾಸ್ತ್ರಗಳು ಪತ್ತೆ.

19

ಚಿಕ್ಕಮಗಳೂರು: ಶರಣಾದ 6 ಜನ ನಕ್ಸಲರು ಬಳಸುತ್ತಿದ್ದ ಶಸ್ತ್ರಾಸ್ತ್ರಗಳು ಪತ್ತೆಯಾಗಿದೆ. ಕೊಪ್ಪ ತಾಲೂಕಿನ ಮೇಗೂರು ಅರಣ್ಯದಲ್ಲಿ ಹೂತು ಇಡಲಾಗಿದ್ದ ಎಕೆ 56 ಗನ್, ರಿವಾಲ್ವಾರ್, ಬಂದೂಕು ಸೇರಿದಂತೆ ಆರು ಶಸ್ತ್ರಾಸ್ತ್ರಗಳನ್ನು ಚಿಕ್ಕಮಗಳೂರು ಪೊಲೀಸರು ಜಪ್ತಿ ಮಾಡಲಾಗಿದೆ. ನಕ್ಸಲರು ಶರಣಾಗತಿಗೂ ಮುನ್ನ ಮೇಗೂರು ಅರಣ್ಯದಲ್ಲಿ ಅಡಗಿದ್ದರು. ಶರಣಾಗುವ ದಿನ ಮೇಗೂರು ಅರಣ್ಯದಲ್ಲೇ ಕೊನೆಯಬಾರಿಗೆ ಸಭೆ ನಡೆಸಿದ್ದರು. ನಂತರ ಸಿಎಂ ಸಿದ್ದರಾಮಯ್ಯ ಮುಂದೆ ಶರಣಾಗಿದ್ದರು. ಶರಣಾಗತಿ ವೇಳೆ ಶಸ್ತ್ರಾಸ್ತ್ರ ಹಸ್ತಾಂತರವಾಗುವ ಕುರಿತು ಚರ್ಚೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕೊಪ್ಪ ಠಾಣೆ ಇನ್ಸ್‍ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ಕಳೆದ 2 ದಿನಗಳಿಂದ ಹುಡುಕಾಟ ನಡೆಸಿ ಶಸ್ತ್ರಾಸ್ತ್ರಗಳನ್ನು ಪತ್ತೆಹಚ್ಚಲಾಗಿದೆ. ನಕ್ಸಲರು ಕೊನೆಯಬಾರಿಗೆ ಸಭೆ ನಡೆಸಿದ್ದ ಸ್ಥಳದಲ್ಲೇ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ ಎಂದು ಪೊಲೀಸ್ ಮೂಲಗಳಿಂದ ವರದಿ ಲಭ್ಯವಾಗಿದೆ. ಒಂದು ಎಕೆ 56, ಮೂರು 303 ರೈಫಲ್, ಒಂದು 12 ಬೋರ್ ಎಸ್‍ಬಿಬಿಎಲ್, ಒಂದು ಕಂಟ್ರಿ ಮೇಡ್ ಪಿಸ್ತೂಲ್ ಸೇರಿಂದತೆ ಒಟ್ಟು ಆರು ಬಂದೂಕುಗಳು ಪತ್ತೆಯಾಗಿವೆ. ಜೊತೆಗೆ 303 ಬಂದೂಕಿನ 133 ಗುಂಡುಗಳು ಸೇರಿದಂತೆ 176 ಜೀವಂತ ಗುಂಡುಗಳು ಪತ್ತೆಯಾಗಿದೆ. ಈ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.