ಬೆಳಗಾವಿ: ನಿನ್ನೆ ವಿಧಾನಪರಿಷತ್ನಲ್ಲಿ ನಡೆದ ಘಟನೆ ಸಂಬಂಧ ಇಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸುದ್ದಿಗೋಷ್ಠಿ ನಡೆಸಿದರು. ಸದನದಲ್ಲಿ ಈ ವಿಚಾರ ಯಾರೂ ಖಂಡಿಸದೇ ಇರುವುದನ್ನು ನೆನೆದು ಗದ್ಗದಿತರಾದರು. ಬಿಜೆಪಿ ಸದಸ್ಯ ಸಿ.ಟಿ.ರವಿ ಅಶ್ಲೀಲ ಪದ ಪ್ರಯೋಗದ ಹಿನ್ನೆಲೆ ಇಂದು ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ನಾವು ಸದನದಲ್ಲಿ ಪ್ರತಿಭಟನೆ ಮಾಡುತ್ತಿದ್ದೆವು. ಧರಣಿ ಮಾಡಿ ಮುಗಿದು ನಾವು ಕುಳಿತಿದ್ದೆವು. ನನ್ನ ಸೀಟ್ ಮೇಲೆ ಸುಮ್ಮನೆ ಕುಳಿತಿದ್ದೆ. ಆಗ ರಾಹುಲ್ ಗಾಂಧಿ ಬಗ್ಗೆ ಡ್ರಗ್ ಎಡಿಕ್ಟ್ ಅಂತ ಸಿಟಿ ರವಿ ಅವರು ಅಂದರು. ತಾವು ಸಹ ಅಪಘಾತ ಮಾಡಿದ್ದೀರಿ ತಾವೂ ಸಹ ಕೊಲೆಗಾರ ಆಗುತ್ತೀರಿ , ಆಗುತ್ತೀರಾ ಅಂದೆ. ನನಗೆ ಬಳಿಕ ಆ ಶಬ್ದವನ್ನು ಸಿಟಿ ರವಿ ಒಮ್ಮೆ ಅಲ್ಲ, ಹತ್ತು ಬಾರಿ ಹೇಳಿದರು. ನನ್ನ ತೇಜೋವಧೆ ಮಾಡಿದರು. ಇದಕ್ಕೆಲ್ಲ ನಾನು ಹೆದರುವುದಿಲ್ಲ ಎನ್ನುತ್ತಲೇ ಆ ಘಟನೆ ನೆನೆದು ಲಕ್ಷ್ಮಿ ಹೆಬ್ಬಾಳ್ಕರ್ ಭಾವುಕರಾದರು. ನಾನೂ ಕೂಡ ಒಬ್ಬ ತಾಯಿ, ಅಕ್ಕ, ಅತ್ತೆ. ನನ್ನ ನೋಡಿ ಸಾವಿರಾರು ಜನ ರಾಜಕೀಯಕ್ಕೆ ಬರಬೇಕು ಅಂತಿರುತ್ತಾರೆ. ಅಂಥವರಿಗೆಲ್ಲ ಇದು ದೊಡ್ಡ ನೋವು ತಂದಿದೆ” ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಕಳವಳ ವ್ಯಕ್ತಪಡಿಸಿದರು. ರಾಜಕಾರಣದಲ್ಲಿ ರೋಷಾವೇಷವಾಗಿ ಭಾಷಣ ಮಾಡುತ್ತೇವೆ. ಜೀವನದಲ್ಲಿ ಒಂದು ಇರುವೆಗೂ ನಾನು ಕಾಟ ಕೊಟ್ಟಿಲ್ಲ. ನಾನು ನನ್ನ ಪಾಡಿಗೆ ರಾಜಕೀಯ ಮಾಡುತ್ತ ಕೈಲಾದಷ್ಟು ಜನರ ಸೇವೆ ಮಾಡಿಕೊಂಡು ಬಂದಿದ್ದೇವೆ. ರಾಜಕೀಯದಲ್ಲಿ ಇರಬೇಕು ಎಂದರೆ ಧೈರ್ಯವಾಗಿರಬೇಕು. ಹಿರಿಯರ ಚಾವಡಿ, ಬುದ್ದಿವಂತರ ಕಟ್ಟೆ ಅಂತ ಕರಿಯುತ್ತಾರೆ. ವಿಧಾನ ಸೌಧದಲ್ಲಿ ಅಂತಹ ಶಬ್ಧ ಪ್ರಯೋಗ ಆದರೂ ಅದನ್ನು ಯಾರೂ ಖಂಡಿಸಲಿಲ್ಲ ಎಂದು ಸಚಿವೆ ಬೇಸರಿಸಿದರು.










