ಸಭ್ಯ, ಸ್ವಾಸ್ಥ್ಯ, ಸುಸಂಸ್ಕೃತ ಸಮಾಜದ ನಿರ್ಮಾಣವಾಗಬೇಕಾದರೆ ನಮ್ಮ ಮಕ್ಕಳು ಸಂಸ್ಕಾರವಂತರಾಗಬೇಕು: ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ.

64
firstsuddi

ಚಿಕ್ಕಮಗಳೂರು: ಸಭ್ಯ ಸ್ವಾಸ್ಥ್ಯ ಮತ್ತು ಸುಸಂಸ್ಕೃತ ಸಮಾಜದ ನಿರ್ಮಾಣವಾಗಬೇಕಾದರೆ ನಮ್ಮ ಮಕ್ಕಳು ಸಂಸ್ಕಾರವಂತರಾಗಬೇಕು ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.

ನಗರದ ಸಂಜೀವಿನಿ ವಿದ್ಯಾಸಂಸ್ಥೆಯಲ್ಲಿ ವಾರ್ಷಿಕೋತ್ಸವದ ಅಂಗವಾಗಿ ನಿನ್ನೆ ನಡೆದ ಕಲರವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಇತ್ತೀಚಿನ ವರ್ಷಗಳಲ್ಲಿ ಹೆತ್ತವರು ತಮ್ಮ ಮಕ್ಕಳನ್ನು ಕೇವಲ ವಿದ್ಯಾವಂತರನ್ನಾಗಿ ಮಾತ್ರ ಮಾಡುತ್ತಿದ್ದಾರೆ. ಅವರಿಗೆ ಜವಾಬ್ದಾರಿ ಕಲಿಸುತ್ತಿಲ್ಲ ಅವರನ್ನು ಸಂಸ್ಕಾರವಂತರನ್ನಾಗಿ ರೂಪಿಸುತ್ತಿಲ್ಲ. ಇದರಿಂದಾಗಿ ಸಮಾಜದಲ್ಲಿ ಅಪರಾಧಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಶಿಕ್ಷಣವಂತರಾದ ಮಕ್ಕಳು ಸಂಸ್ಕಾರವಿಲ್ಲದಿರುವುದರಿಂದಾಗಿ ಇಂದು ಹೆತ್ತವರನ್ನು ಕಡೆಗಣಿಸುತ್ತಿದ್ದಾರೆ. ಅವರು ಸತ್ತ ಸಂದರ್ಭದಲ್ಲೂ ಸಹ ಅತ್ತ ತಲೆ ಹಾಕುತ್ತಿಲ್ಲ ಎಂದು ವಿಷಾದಿಸಿದರು.

ಮನುಷ್ಯನ ಸರ್ವಾಂಗೀಣ ಅಭಿವೃದ್ಧಿಗೆ ಬದುಕಿಗೆ ವಿದ್ಯೆ ಅತ್ಯಗತ್ಯ ಹಾಗಾಗಿ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ಅದರ ಜೊತೆಜೊತೆಗೆ ಹೆತ್ತವರು ಅವರಿಗೆ ಜವಾಬ್ದಾರಿಯನ್ನು ಕಲಿಸಬೇಕು. ಅವರಲ್ಲಿ ಸಂಸ್ಕಾರವನ್ನು ಬೆಳೆಸಬೇಕು ಎಂದು ಕಿವಿಮಾತು ಹೇಳಿದರು.

ಕಲರವ ಕೈಪಿಡಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಶಾಸಕ ಎಚ್.ಡಿ.ತಮ್ಮಯ್ಯ, ಮಕ್ಕಳು ಅಕ್ಷರ ಕಲಿತು ವಿದ್ಯಾವಂತರಾದರಷ್ಟೇ ಸಾಲದು, ಅವರು ಸಂಸ್ಕಾರವಂತರೂ ಆಗಬೇಕು ಎಂದು ಸಲಹೆ ಮಾಡಿದರು.

ಮಲೆನಾಡು ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಡಾ.ಡಿ.ಎಲ್.ವಿಜಯಕುಮಾರ್ ಮಾತನಾಡಿ, ಹೆತ್ತವರು ತಮ್ಮ ಮಕ್ಕಳ ನಡೆಯನ್ನು ಸದಾ ಗಮನಿಸುತ್ತಿರಬೇಕು. ಅವರನ್ನು ಎಳೆಯ ವಯಸ್ಸಿನಿಂದಲೇ ತಿದ್ದಿತೀಡುವ ಕೆಲಸ ಮಾಡಬೇಕು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಜೀವಿನಿ ವಿದ್ಯಾಸಂಸ್ಥೆಯ ಅಧ್ಯಕ್ಷೆ ಎಸ್.ಶಾಂತಕುಮಾರಿ, 1982ರಲ್ಲಿ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರಿಂದ ಆರಂಭಗೊಂಡ ಸಂಸ್ಥೆ ಇದುವರೆಗೆ ಸಹಸ್ರಾರು ಮಕ್ಕಳನ್ನು ವಿದ್ಯಾವಂತರನ್ನಾಗಿ, ಸಂಸ್ಕಾರವಂತರನ್ನಾಗಿ ರೂಪಿಸಿದೆ ಎಂದು ತಿಳಿಸಿದರು.

ಮುಖ್ಯ ಶಿಕ್ಷಕ ಎನ್.ಆರ್.ಪವನ್‍ಕುಮಾರ್ ಶಾಲಾ ವಾರ್ಷಿಕ ವರದಿಯನ್ನು ಮಂಡಿಸಿದರು. ಸಂಸ್ಥೆಯ ಕಾರ್ಯದರ್ಶಿ ಪಿ.ಕೆ.ರಮೇಶ್, ಖಜಾಂಚಿ ಎಂ.ಪಿ.ಉಡುಪ, ಉಪಾಧ್ಯಕ್ಷ ಶ್ರೀಕಾಂತ್ ಆಚಾರ್ಯ, ಹರಿದಾಸ್, ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ.ಮೋಹನ್, ನಾರಾಯಣ, ಮಲ್ಯ, ಶಿಕ್ಷಕರಾದ ರಾಗಶ್ರೀ, ಶೃತಿ ಉಪಸ್ಥಿತರಿದ್ದರು. ಸಮಾರಂಭದ ನಂತರ ವಿದ್ಯಾರ್ಥಿಗಳಿಂದ ನಡೆದ ದಶವತಾರ ನೃತ್ಯ ರೂಪಕ ಸಾರ್ವಜನಿಕರ ಗಮನ ಸೆಳೆಯಿತು.