ಕೋಲಾರ: ಅಂತರಗಂಗೆ ಬೆಟ್ಟದ ಬಂಡೆ ಕಲ್ಲುಗಳ ಮೇಲೆ ಹಸಿರು ಬಣ್ಣ ಬಳಿದು ವಿವಾದಾತ್ಮಕ ಪೇಂಟಿಂಗ್ ಮಾಡಿದ್ದ ಆರೋಪಿಯನ್ನು ಕೋಲಾರದ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಅನ್ವರ್ ಎಂದು ಗುರುತಿಸಲಾಗಿದೆ. ವಿವಾದಾತ್ಮಕ ಬರಹಗಳ ವಿಚಾರವಾಗಿ ಅರಣ್ಯ ಇಲಾಖೆಯವರು ದೂರು ನೀಡಿದ್ದರು. ದೂರಿನ ಅನ್ವಯ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಕಾಶಿ ವಿಶ್ವನಾಥ ದೇವಾಲಯ ಇರುವ ಬೆಟ್ಟದ ದೊಡ್ಡ ಬಂಡೆಯೊಂದರ ಮೇಲೆ ಹಸಿರು ಬಿಳಿ ಬಣ್ಣ ಬಳಸಿ ಪಾಕಿಸ್ತಾನದ ಬಾವುಟದ ಮಾದರಿಯ ಚಿತ್ರ ಬಿಡಿಸಿದ್ದ. ಅಲ್ಲದೇ ಅದರ ಮೇಲೆ ಉರ್ದು ಅಕ್ಷರಗಳನ್ನು ಬರೆದಿದ್ದ. 786 ಎಂದು ಧ್ವಜದ ಮೇಲೆ ಬರೆಯಲಾಗಿದ್ದು, ಅದರ ಪಕ್ಕದಲ್ಲೆ ಭಾರತದ ಬಾವುಟವನ್ನು ಸಹ ಬಿಡಿಸಿದ್ದ. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಕೃತ್ಯಕ್ಕೆ ಕಾರಣ ಹಾಗೂ ಅದರ ಹಿಂದಿನ ಉದ್ದೇಶದ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.










