ನವದೆಹಲಿ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಹಿನ್ನೆಲೆ ಇಂದು ಉತ್ತರಪ್ರದೇಶದ ಚಂದೌಲಿಯಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾಗುವುದಿಲ್ಲ ಎಂದು ಪ್ರಿಯಾಂಕಾ ಗಾಂಧಿ ಸ್ಪಷ್ಟಪಡಿಸಿದ್ದಾರೆ.
ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಕುರಿತು ಸ್ವತಃ ಪ್ರಿಯಾಂಕ ಗಾಂಧಿ ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ. ಬಿಹಾರದಿಂದ ಉತ್ತರಪ್ರದೇಶಕ್ಕೆ ಭಾರತ್ ಜೋಡೋ ನ್ಯಾಯ್ ಯಾತ್ರೆ ತಲುಪುವ ವೇಳೆ ತಾನೂ ಅದರಲ್ಲಿ ಪಾಲ್ಗೊಳ್ಳಬೇಕೆಂದು ಬಯಸಿದ್ದೆ. ಆದರೆ ಅನಾರೋಗ್ಯದಿಂದಾಗಿ ನಾನು ಆಸ್ಪತ್ರೆ ಸೇರಬೇಕಾಯಿತು. ಅನಾರೋಗ್ಯದಿಂದ ಚೇತರಿಸಿಕೊಂಡ ತಕ್ಷಣ ಮತ್ತೆ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಪ್ರಿಯಾಂಕಾ ಗಾಂಧಿ ಸ್ಪಷ್ಟನೆ ನೀಡಿದ್ದಾರೆ.
ಯಾತ್ರೆಯಲ್ಲಿ ತಾನು ಭಾಗಿಯಾಗದ ಹಿನ್ನೆಲೆ ಭಾರತ್ ನ್ಯಾಯ್ ಯಾತ್ರೆಯಲ್ಲಿ ಶ್ರಮಿಸಿದ ಎಲ್ಲಾ ನನ್ನ ಸಹೋದ್ಯೋಗಿಗಳು, ಯಾತ್ರಿಗಳು ಹಾಗೂ ನನ್ನ ಸಹೋದರನಿಗೆ ಶುಭಹಾರೈಸುತ್ತೇನೆ ಎಂದು ಪ್ರಿಯಾಂಕಾ ಗಾಂಧಿ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.










