ಬೆಂಗಳೂರು: ಇನ್ಫೋಸಿಸ್ನಲ್ಲಿ ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾಗೊಳಿಸಲಾಗುತ್ತಿದೆ ಎಂದು ಟೆಕ್ ಉದ್ಯೋಗಿಗಳ ಸ್ವತಂತ್ರ ಸಂಘಟನೆಯೊಂದು ನೀಡಿದ ದೂರನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಸಮಸ್ಯೆಯನ್ನು ಬಗೆಹರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಿ ಎಂದು ಕರ್ನಾಟಕ ಕಾರ್ಮಿಕ ಇಲಾಖೆಗೆ ಕೇಂದ್ರ ಕಾರ್ಮಿಕ ಸಚಿವಾಲಯ ಸೂಚನೆ ನೀಡಿದೆ. ಇನ್ಫೋಸಿಸ್ ಮೈಸೂರು ಕ್ಯಾಂಪಸ್ನಲ್ಲಿ ತರಬೇತಿ ಹಂತದಲ್ಲಿರುವ ಸುಮಾರು 300 ಹೊಸ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುತ್ತಿರುವುದಾಗಿ ಕಳೆದ ವಾರ ಇನ್ಫೋಸಿಸ್ ಒಪ್ಪಿಕೊಂಡಿತ್ತು. ಆದರೆ ಈ ಸಂಖ್ಯೆಗಳ ಬಗ್ಗೆ ಟೆಕ್ ಉದ್ಯೋಗಿಗಳ ಹಿತಾಸಕ್ತಿ ಕಾಪಾಡುವುದಕ್ಕೆಂದು ರೂಪುಗೊಂಡಿರುವ ಸ್ವತಂತ್ರ ಸಂಘಟನೆ ಅನುಮಾನ ವ್ಯಕ್ತಪಡಿಸಿತ್ತು. ಕಳೆದ ಶುಕ್ರವಾರ ಏಕಾಏಕಿ ಮೈಸೂರು ಕ್ಯಾಂಪಸ್ನ 700 ಟ್ರೇನಿಗಳನ್ನು ಇನ್ಫೋಸಿಸ್ ವಜಾ ಗೊಳಿಸುತ್ತಿದೆ ಎಂದು ಆರೋಪಿಸಿತ್ತು. ಬಳಿಕ ಕೇಂದ್ರ ಕಾರ್ಮಿಕ ಇಲಾಖೆಗೆ ಅಧಿಕೃತವಾಗಿ ಪತ್ರ ಬರೆದು ದೂರು ನೀಡಿತ್ತು. ಇನ್ಫೋಸಿಸ್ ಲೇಆಫ್ ವಿಚಾರದಲ್ಲಿ ತಕ್ಷಣವೇ ಮಧ್ಯಪ್ರವೇಶಿಸಿ ಕಂಪನಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿತ್ತು.










