ಎಲ್ಲರೂ ಪ್ರಕೃತಿಯನ್ನು ದೇವರೆಂದು ಪೂಜಿಸಿ, ಹಸಿರು ಬೆಳೆಸಿ, ನನ್ನ ಹಾಗೇ ಗಿಡ ನೆಡಿ ಎಂದು ಪದ್ಮಶ್ರೀ ಪುರಸ್ಕೃತೆ, ಪರಿಸರ ಪ್ರೇಮಿಡಾ ತುಳಸಿ ಗೌಡ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಗರ ಹೊರವಲಯದ ಕುವೆಂಪು ವಿದ್ಯಾನಿಕೇತನ ಶಾಲೆಯಲ್ಲಿ ಇಂದು ವಿದ್ಯಾರ್ಥಿಗಳೊಂದಿಗೆ ಪರಿಸರ ಕುರಿತ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬಿಂಕ ಬಿಗು ಮಾನವಿಲ್ಲದೆ ಸರಳವಾಗಿ ವಿದ್ಯಾರ್ಥಿಗಳೊಂದಿಗೆ ಆತ್ಮೀಯವಾಗಿ ಬೆರೆತು ಅವರೊಂದಿಗೆ ಪ್ರೀತಿಯಿಂದ ಮಾತನಾಡಿದ ಅವರು ಈ ಭೂಮಿ ನಮಗೆ ಗಾಳಿ ನೀರು ಆಹಾರ ನೀಡಿ ಪೋಷಿಸಿದೆ. ನಾವು ಗಿಡಗಳನ್ನು ನೆಡುವ ಮೂಲಕ ಅದರ ಋಣ ತೀರಿಸಬೇಕು ಎಂದರು.
ಗಿಡ ನೆಡುವುದರಿಂದ ಹಸಿರು ಪರಿಸರ ಬೆಳೆಯುತ್ತದೆ. ಹೂವು ಹಣ್ಣು ನೆರಳು ನೀರು ಗಾಳಿ ಎಲ್ಲವೂ ನಮಗೆ ಸಿಗುತ್ತದೆ ಕಾಲಕಾಲಕ್ಕೆ ಮಳೆ ಬೆಳೆಯಾಗಿ ನಾಡು ಸಮೃದ್ಧವಾಗುತ್ತದೆ ಎಂದು ತಿಳಿಸಿದರು.
ನೀವು ಏನು ಮಾಡದಿದ್ದರೂ ಪರವಾಗಿಲ್ಲ ಆದರೆ ಮನೆ ಶಾಲೆ ಮೈದಾನ ರಸ್ತೆ ಬದಿ ಸೇರಿದಂತೆ ಎಲ್ಲೆಲ್ಲಿ ಸಾಧ್ಯವೊ ಅಲ್ಲೆಲ್ಲಾ ಗಿಡವನ್ನು ನೆಡಿ, ನಾವು ಬೇವು ಹೊಂಗೆ ಹಲಸು ನೇರಳೆಯಂತಹ ಸಮಾಜಕ್ಕೆ ಉಪಯೋಗವಾಗುವ ಪರಿಸರದ ಉಳಿವಿಗೆ ಪೂರಕವಾಗುವಂತಹ ಗಿಡಗಳನ್ನು ನೆಡಿ ಎಂದು ಸಲಹೆ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ಕಾರ್ಯದರ್ಶಿ ಕೆ.ಸಿ ಶಂಕರ್ ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆ ಮತ್ತು ಪರಿಸರ ಪ್ರೀತಿಯನ್ನು ಬೆಳೆಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಎಲ್ಲ ಸೇವೆಗಳಿಗಿಂತ ಮಿಗಿಲಾದ ಮತ್ತು ಶ್ರೇಷ್ಠವಾದ ಸೇವೆ ಎಂದರೆ ಪರಿಸರವನ್ನು ರಕ್ಷಿಸುವುದು ಮತ್ತು ಪೋಷಿಸುವುದು ಎಂದ ಅವರು ಬೇರೆ ಎಲ್ಲಾ ಸೇವೆಗಳು ಕೆಲವು ವರ್ಗವನ್ನು ಕೆಲವು ಮನುಷ್ಯರನ್ನು ಮಾತ್ರ ತಲುಪುತ್ತವೆ ಆದರೆ ಪರಿಸರವನ್ನು ಉಳಿಸಲು ಮಾಡುವ ಸೇವೆ ಎಲ್ಲ ಜೀವಿಗಳನ್ನೂ ತಲುಪುತ್ತದೆ ಎಂದು ತಿಳಿಸಿದರು.
ಬೆಳಗಿನಿಂದ ಮಧ್ಯಾಹ್ನದವರೆಗೆ ಮಕ್ಕಳೊಂದಿಗೆ ಮಕ್ಕಳಂತೆ ಬೆರೆತು ಹಸನ್ಮುಖದಿಂದ ಶಾಲೆಯಲ್ಲಿ ಓಡಾಡಿದ ವಯೋವೃದ್ದೆ ತುಳಸಿ ವಿದ್ಯಾರ್ಥಿಗಳ ಎಲ್ಲಾ ಪ್ರಶ್ನೆಗಳಿಗೂ ನಗುಮುಖದಿಂದ ಉತ್ತರಿಸುವುದರ ಜೊತೆಗೆ ಶಾಲೆಯ ಆವರಣದಲ್ಲಿ ಸ್ವತಃ ಗಿಡ ನೆಟ್ಟರು.
ಶಾಲೆ ವತಿಯಿಂದ ಡಾಕ್ಟರ್ ತುಳಸಿ ಗೌಡ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಟ್ರಸ್ಟಿ ಅರ್ಚನಾ ಶಂಕರ್, ಪ್ರಾಂಶುಪಾಲ ವಿ.ಎಸ್ ರಾಘವೇಂದ್ರ, ಉಪ ಪ್ರಾಂಶುಪಾಲೆ ಶೆಮ್ಮಿ, ಶಿಕ್ಷಕಿ ಸೌಮ್ಯ ಉಪಸ್ಥಿತರಿದ್ದರು.










