ಚಿಕ್ಕಮಗಳೂರು: ಭಾರತ ಸೇವಾದಳವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲಾ ಶಾಲಾ ಕಾಲೇಜುಗಳಲ್ಲೂ ಸೇವಾದಳದ ಘಟಕಗಳನ್ನು ಸ್ಥಾಪಿಸಬೇಕು ಎಂದು ಭಾರತ ಸೇವಾದಳದ ಕೇಂದ್ರ ಸಮಿತಿ ಸದಸ್ಯೆ ಉಮಾ ಐ.ಬಿ.ಶಂಕರ್ ಸಲಹೆ ಮಾಡಿದರು.
ಭಾರತ ಸೇವಾದಳದ ತಾಲೂಕು ಸಮಿತಿ ಆಯೋಜಿಸಿರುವ ಶಾಲೆಗಳಲ್ಲಿ ಸೇವಾದಳ ಅಭಿಯಾನಕ್ಕೆ ತೇಗೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಚಾಲನೆ ನೀಡಿ ಅವರು ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಮಹತ್ತರ ಪಾತ್ರ ವಹಿಸಿದ್ದ, ಸ್ವಾತಂತ್ರ್ಯ ಹೋರಾಟಕ್ಕೆ ಲಕ್ಷಾಂತರ ದೇಶ ಭಕ್ತರನ್ನು ಕೊಡುಗೆಯಾಗಿ ನೀಡಿದ್ದ ಭಾರತ ಸೇವಾದಳಕ್ಕೆ ಕಾಯಕಲ್ಪ ನೀಡುವ ಅಗತ್ಯವಿದೆ ಎಂದರು.
ಇಂದಿನ ಪೀಳಿಗೆಯಲ್ಲಿ ರಾಷ್ಟ್ರಭಕ್ತಿ, ದೇಶಪ್ರೇಮ ಮತ್ತು ಶಿಸ್ತನ್ನು ಬೆಳೆಸಲು ಭಾರತ ಸೇವಾದಳ ಅಗತ್ಯ. ಹಾಗಾಗಿ ಅದನ್ನು ಶಿಕ್ಷಕರು ಜತನದಿಂದ ಕಾಪಾಡಬೇಕು ಎಂದು ಕಿವಿ ಮಾತು ಹೇಳಿದರು.
ಭಾರತ ಸೇವಾದಳದ ಜಿಲ್ಲಾ ಕಾರ್ಯದರ್ಶಿ ಹಂಪಯ್ಯ ಮಾತನಾಡಿ, ವಿದ್ಯಾರ್ಥಿಗಳಲ್ಲಿ ರಾಷ್ಟ್ರಭಕ್ತಿ, ದೇಶಪ್ರೇಮ ಮತ್ತು ಭಾವೈಕ್ಯತೆಯನ್ನು ಬೆಳೆಸುವ ನಿಟ್ಟಿನಲ್ಲಿ ಭಾರತ ಸೇವಾದಳ ಅತ್ಯಂತ ಸಹಕಾರಿಯಾಗಿದೆ ಎಂದರು.
ಸೇವಾದಳದ ತಾಲೂಕು ಅಧ್ಯಕ್ಷ ಜಿ.ಶಂಕರ್ ಮಾತನಾಡಿ, ನೂತನ ಅಭಿಯಾನದಡಿ ತಾಲೂಕಿನ ಎಲ್ಲಾ ಶಾಲೆಗಳಲ್ಲೂ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕು ಸಂಘಟಕ ಎಸ್.ಇ. ಲೋಕೇಶ್ವರಾಚಾರ್ ನೂತನ ಅಭಿಯಾನದಡಿ ಎಲ್ಲಾ ಶಾಲೆಗಳಲ್ಲೂ ಮಕ್ಕಳಿಗೆ ರಾಷ್ಟ್ರಧ್ವಜ, ರಾಷ್ಟ್ರಗೀತೆ, ಭಾವೈಕ್ಯತೆ, ಪರಿಸರ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲಾಗುವುದು. ಯೋಗ ಶಿಕ್ಷಣ ನೀಡಲಾಗುವುದು ಎಂದು ತಿಳಿಸಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಟಿ.ಎಂ. ತಾರಾಮಣಿ ಅಧ್ಯಕ್ಷತೆ ವಹಿಸಿದ್ದರು. ಸೇವಾದಳದ ತಾಲೂಕು ಕಾರ್ಯದರ್ಶಿ ಮಹೇಶಪ್ಪ, ಉಪಾಧ್ಯಕ್ಷ ಕಾಳಯ್ಯ, ಜಿಲ್ಲಾ ಸಂಘಟಕ ಚಂದ್ರಕಾಂತ, ಮುಖ್ಯ ಶಿಕ್ಷಕ ದಿನೇಶ್, ಶಿಕ್ಷಕರಾದ ಕೆ.ಎನ್. ರೇಖಾ, ವಿ.ಟಿ. ಪ್ರೇಮ ಉಪಸ್ಥಿತರಿದ್ದರು.










