ಓದು ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುತ್ತದೆ: ರವೀಶ್ ಕ್ಯಾತನಬೀಡು.

68
firstsuddi

ಚಿಕ್ಕಮಗಳೂರು: ಓದು ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದು ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ, ಸಾಹಿತಿ, ರವೀಶ್ ಕ್ಯಾತನಬೀಡು ಹೇಳಿದರು.

ಕುಂಭಕ ಓದುಗ ಬಳಗ ತಾಲೂಕಿನ ತಿರುಗುಣ ಗ್ರಾಮದ ಕಾಫಿ ಬೆಳೆಗಾರ ಟಿ.ಬಿ. ತಿಮ್ಮೇಗೌಡ ಅವರ ಮನೆಯಂಗಳದಲ್ಲಿ ನಿನ್ನೆ ಏರ್ಪಡಿಸಿದ್ದ ಪುಸ್ತಕ, ಓದು, ಚರ್ಚೆ ಮತ್ತು ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಓದು ನಮ್ಮನ್ನು ಸುಸಂಸ್ಕೃತರನ್ನಾಗಿ ಮಾಡುತ್ತದೆ. ಸಮಾಜದಲ್ಲಿ ಗೌರವವನ್ನು ತಂದುಕೊಡುತ್ತದೆ. ನಮ್ಮಲ್ಲಿ ವೈಚಾರಿಕತೆಯನ್ನು ಬೆಳೆಸುತ್ತದೆ ಎಂದರು.

ಸಾಹಿತ್ಯದ ಸಭೆಗಳು ಕಾರ್ಯಕ್ರಮಗಳು ಮನೆ, ಮನಗಳನ್ನು ಬೆಸೆಯುತ್ತವೆ. ಸಂಬಂಧಗಳನ್ನು ಗಟ್ಟಿಗೊಳಿಸುತ್ತವೆ ಎಂದ ಅವರು, ಎಲ್ಲರೂ ತಮ್ಮ ಮನೆಯ ಕಪಾಟುಗಳಲ್ಲಿ ಶಿವರಾಮಕಾರಂತರು, ಎಸ್.ಎಲ್. ಭೈರಪ್ಪನವರಂತಹ ಸಾಹಿತಿಗಳ ಉತ್ತಮ ಪುಸ್ತಕಗಳನ್ನು ಇಡಬೇಕು ಎಂದು ಕಿವಿಮಾತು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕುಂಭಕ ಓದುಗ ಬಳಗದ ಅಧ್ಯಕ್ಷ ಕುಂದೂರು ಅಶೋಕ್, ಟಿ.ವಿ., ಮೊಬೈಲ್, ವಾಟ್ಸಾಪ್, ಫೇಸ್‍ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಿಂದಾಗಿ ನಮ್ಮಲ್ಲಿ ಓದುಗರ ಸಂಖ್ಯೆ ಕ್ಷೀಣಿಸುತ್ತಿದೆ. ಓದುವ ಸಂಸ್ಕೃತಿ ಮರೆಯಾಗಿದೆ ಎಂದು ವಿಷಾಧಿಸಿದರು.

ಈ ಹಿನ್ನಲೆಯಲ್ಲಿ ಗ್ರಾಮೀಣ ಜನರಲ್ಲಿ ಓದುವ ಅಭಿರುಚಿಯನ್ನು ಬೆಳೆಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಇಂಜಿನಿಯರ್ ಕುಮಾರ್ ಕಲ್ಕುಳಿ ವಿಠ್ಠಲ ಹೆಗಡೆ ಅವರ ಮಂಗನ ಬ್ಯಾಟೆ ಪುಸ್ತಕದ ಕುರಿತು ಮಾತನಾಡಿದರು. ಇದೆ ವೇಳೆ ಮಂಗನ ಬ್ಯಾಟೆ ಪುಸ್ತಕದ ಕುರಿತು ಸಭಿಕರೊಂದಿಗೆ ಚರ್ಚೆ, ಸಂವಾದ ನಡೆದವು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಫಿ ಬೆಳೆಗಾರ ಟಿ.ಬಿ. ತಿಮ್ಮೇಗೌಡ ಕಾರ್ಯಕ್ರಮಕ್ಕೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜಗನ್ನಾಥ್, ಕುಂದೂರು ಭದ್ರಮ್ಮ, ಸಾಹಿತಿ ಡಿ.ಎಂ. ಮಂಜುನಾಥ ಸ್ವಾಮಿ, ಶೇಷೇಗೌಡ ಮಾವಿನಕೆರೆ, ದಯಾನಂದ್ ಉಪಸ್ಥಿತರಿದ್ದರು.