ಕನ್ನಡ ತಬ್ಬಲಿ ಮಕ್ಕಳ ಭಾಷೆಯೇ? – ಕೇಂದ್ರದ ಮಲತಾಯಿ ಧೋರಣೆ ವಿರುದ್ಧ ಹೆಚ್‍ಡಿಕೆ ಆಕ್ರೋಶ…

46
firstsuddi

ಬೆಂಗಳೂರು : ಕರ್ನಾಟಕ ಹಾಗೂ ಕನ್ನಡ ಭಾಷೆ ಬಗ್ಗೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿ 15 ವರ್ಷಗಳೇ ಆಯಿತು. 13 ವರ್ಷಗಳಲ್ಲಿ ಕನ್ನಡಕ್ಕೆ ಸಿಕ್ಕಿದ ಅನುದಾನ ಕೇವಲ 3 ಕೋಟಿ ರೂ. ತಮಿಳಿಗೆ ಸಿಕ್ಕಿದ್ದು 43 ಕೋಟಿ ರೂ. ಆದರೆ, ಸಂಸ್ಕೃತಕ್ಕೆ ಇವರು ಕೊಟ್ಟಿದ್ದು ಬರೋಬ್ಬರಿ 643 ಕೋಟಿ ರೂ. ಕನ್ನಡದ ಕಣ್ಣಿಗೆ ಸುಣ್ಣ, ಬೇರೆ ಭಾಷೆಗಳಿಗೆ ಬೆಣ್ಣೆ. ಕನ್ನಡ ತಬ್ಬಲಿ ಮಕ್ಕಳ ಭಾಷೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.

ಕೇಂದ್ರದಿಂದ ಕನ್ನಡಕ್ಕೆ ಆಗುತ್ತಿರುವ ಅನುದಾನದ ಅನ್ಯಾಯದ ವಿರುದ್ಧ ನಾನು ಅನೇಕ ಸಲ ದನಿ ಎತ್ತಿದ್ದೇನೆ. ಬಿಜೆಪಿ, ಕಾಂಗ್ರೆಸ್ ಪಕ್ಷಗಳ ಆಡಳಿತಕ್ಕೆ ಅದು ಕೇಳಲೇ ಇಲ್ಲ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಸಂಸ್ಕೃತ, ಹಿಂದಿ ತುಷ್ಟೀಕರಣದಿಂದ ಕನ್ನಡಕ್ಕೆ ಅದೆಷ್ಟು ವಂಚನೆ ಆಗಿದೆ ಎನ್ನುವುದಕ್ಕೆ ಅನುದಾನದ ತಾರತಮ್ಯವೇ ಸಾಕ್ಷಿ.

ಈಗ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ.ದೊಡ್ದರಂಗೇಗೌಡ ಅವರೇ ಸಮ್ಮೇಳನದ ತಮ್ಮ ಭಾಷಣದಲ್ಲಿ ಅನುದಾನದ ಅನ್ಯಾಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಎದುರೇ ಬಿಜೆಪಿ ಸರ್ಕಾರದ ಮುಖಕ್ಕೆ ರಾಚುವಂತೆ ಹೇಳಿದ್ದಾರೆ. ಈ ವಿಷಯ ಪ್ರಸ್ತಾಪ ಮಾಡಿದ ಅವರನ್ನು ಮನಸಾರೆ ಅಭಿನಂದಿಸುತ್ತೇನೆ ಎಂದು ಹೇಳಿದ್ದಾರೆ.

ಹಿಂದಿ ಹೇರಿಕೆ ಮೂಲಕ ಸದಾ ಕನ್ನಡದ ಮೇಲೆ ಪ್ರಹಾರ ನಡೆಸುತ್ತಲೇ ಇರುವ ಕೇಂದ್ರ ಬಿಜೆಪಿ ಅವಕಾಶ ಸಿಕ್ಕಾಗಲೆಲ್ಲ ಕನ್ನಡದ ಬೇರುಗಳಿಗೆ ಕೊಡಲಿ ಪೆಟ್ಟು ಕೊಡುತ್ತಿದೆ. ನೆಲ, ಜಲ, ಭಾಷೆ ವಿಷಯದಲ್ಲಿ ಕರ್ನಾಟಕಕ್ಕೆ ಆ ಪಕ್ಷವು ಅನ್ಯಾಯದ ಸರಣಿಯನ್ನೇ ಮುಂದುವರಿಸಿದೆ. ಬೆಳಗಾವಿ ವಿಷಯದಲ್ಲಿ ಕೇಂದ್ರ ಬಿಜೆಪಿ ವರ್ತಿಸುತ್ತಿರುವ ರೀತಿ ಕಳವಳಕಾರಿ. ಒಕ್ಕೂಟ ಭಾಷೆಗಳ ನಡುವೆ ಅನುದಾನದಲ್ಲಿ ಮಾತ್ರವಲ್ಲ, ಯಾವ ವಿಷಯದಲ್ಲೂ ತಾರತಮ್ಯ ಎಸಗಬಾರದು. ಈ ವ್ಯವಸ್ಥೆಯಲ್ಲಿ ಆಡಳಿತ ನಡೆಸುವವರಿಗೆ ರಾಜಧರ್ಮ ಪಾಲನೆ ಅತ್ಯಗತ್ಯ. ದೇಶಕ್ಕೆ ಅತಿಹೆಚ್ಚು ತೆರಿಗೆ ತೆರುತ್ತಿರುವ ಕರ್ನಾಟಕದ ವಿಷಯದಲ್ಲಿ ಇಂಥ ರಾಜಧರ್ಮ ಪಾಲನೆ ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.