ಬೆಳಗಾವಿ : ಮಹಾರಾಷ್ಟ್ರದ ಕೊಲ್ಲಾಪುರದ ಕನ್ನೇರಿ ಸಿದ್ಧಗಿರಿ ಮಠದಲ್ಲಿ ಸಂತ ಸಮಾವೇಶ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕನ್ನೇರಿ ಮಠದಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕೆ 3 ಕೋಟಿ ರೂ. ನೀಡಿದ್ದು, ಕೆಲಸ ಪ್ರಾರಂಭ ಮಾಡಬೇಕು. ಮುಂಬರುವ ದಿನಗಳಲ್ಲಿ ಕರ್ನಾಟಕ ಭವನದೊಳಗಿನ ಕೆಲಸ ಕಾರ್ಯಕ್ಕೆ ಎರಡು ಕೋಟಿ ನೀಡುತ್ತೇನೆ ಎಂದು ಭರವಸೆ ನೀಡಿದರು.
ಇಂದು ಸಹೃದಯಿ ಸಂತರ ಸಮಾವೇಶ ನಡೆಯುತ್ತಿರುವುದು ಸಂತಸದ ಸಂಗತಿಯಾಗಿದೆ. ಇಲ್ಲಿ ಪ್ರಥಮ ಬಾರಿ ಬರುತಿದ್ದೇನೆ, ಭಕ್ತಿ ಭಾವ ಕಾರ್ಯಕ್ರಮ, ಮಠದ ಸೇವೆಯನ್ನು ನೋಡಿದಾಗ ಇದು ಆದರ್ಶ ಮಠ ಅನಿಸುತ್ತದೆ. ತಮ್ಮದೇ ಆದ ಆದರ್ಶ ಇಟ್ಟುಕೊಂಡು ಭಕ್ತರಲ್ಲಿ ಜಾಗೃತಿ ಮೂಡಿಸಿ ಧಾರ್ಮಿಕ, ಸಾಮಾಜಿಕ, ಆರ್ಥಿಕ ಕ್ರಾಂತಿಯನ್ನು ಕನ್ನೇರಿಮಠ ಮಾಡುತ್ತಿದೆ ಎಂದರು.
ಜನ್ಮಕೊಟ್ಟ ತಾಯಿ, ಸಲಹುವ ತಾಯಿ ಎರಡನ್ನೂ ಪೋಷಿಸಿದಾಗ ನಮ್ಮ ಜನ್ಮ ಸಾರ್ಥಕ. ಬೇರೆ ದೇಶಕ್ಕೂ ನಮಗೂ ಇರುವ ವ್ಯತ್ಯಾಸ ನಮ್ಮ ಸಂಸ್ಕೃತಿ, ಸಂಸ್ಕಾರ. ಅದು ನಮ್ಮ ದೇಶದ ಮಠ ಮಂದಿರಗಳಲ್ಲಿ ಸಿಗುತ್ತೆ. ನಾಗರೀಕತೆ ಮತ್ತು ಸಂಸ್ಕೃತಿ ಮಧ್ಯದ ವ್ಯತ್ಯಾಸ ಮರೆತಿದ್ದೇವೆ. ನಾಗರೀಕತೆಯನ್ನೇ ನಾವು ಸಂಸ್ಕೃತಿ ಅಂದುಕೊಂಡಿದ್ದೇವೆ. ನಾವು ಹಿಂದೆ ಏನಾಗಿದ್ದೆವೋ ಅದು ನಾಗರಿಕತೆ, ನಾವೇನ್ ಆಗಬೇಕಲ್ಲ ಅದು ನಮ್ಮ ಸಂಸ್ಕೃತಿ. ನಾಗರಿಕತೆ, ಸಂಸ್ಕೃತಿ ಇವತ್ತಿನ ಆಧುನೀಕರಣ ದಿಂದ ಬೇರ್ಪಡುತ್ತಿವೆ. ಇದು ಸರಿಯಾದ ಬೆಳವಣಿಗೆಯಲ್ಲ ಎಂದರು.










