ಬೆಂಗಳೂರು : ಕರ್ನಾಟಕದ ಒಂದಿಂಚೂ ಜಾಗವನ್ನು ಕಬಳಿಸಲು ಯಾರಿಗೂ ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾಜನ್ ಆಯೋಗದ ವರದಿಯಂತೆ ಯಾವ ರಾಜ್ಯಕ್ಕೆ ಯಾವ ಭಾಗ ಸೇರಬೇಕೆಂದು ಸ್ಪಷ್ಟವಾಗಿ ಹೇಳಿದೆ. ಇದರಲ್ಲಿ ಯಾವುದೇ ಗೊಂದಲಗಳಿಲ್ಲ. ಶಿವಸೇನೆ ಈ ಬಗ್ಗೆ ವಿವಾಧ ಸೃಷ್ಟಿಸುತ್ತಿರುವುದು ಸರಿಯಲ್ಲ. ಕನಾಟಕದ ಒಂದಿಂಚೂ ಭೂಮಿಯನ್ನು ಕಬಳಿಸಲು ಯಾರಿಗೂ ಬಿಡುವುದಿಲ್ಲ. ರಾಜ್ಯದ ಗಡಿ ಭಾಗದಲ್ಲಿ ಶಾಂತಿ ಕಾಪಾಡಲು ಸರ್ಕಾರ ಬದ್ಧವಾಗಿದೆ. ಗಡಿ ನಿಗದಿ ವಿಚಾರದಲ್ಲಿ ಮಹಾಜನ್ ಆಯೋಗದ ವರದಿಯೇ ಅಂತಿಮ. ಗಡಿ ವಿಚಾರದಲ್ಲಿ ಶಿವಸೇನೆ ತೆಗೆಯುತ್ತಿರುವ ಗೊಂದಲಗಳಿಗೆ ಸೂಕ್ತ ರೀತಿಯಲ್ಲೇ ಉತ್ತರಿಸುತ್ತೇನೆ. ಈ ವಿಚಾರವಾಗಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಕರ್ನಾಟಕದ ಒಂದಿಂಚೂ ಜಾಗವನ್ನು ಸಹ ಬಿಡುವುದಿಲ್ಲ. ಗಡಿ ಭಾಗದ ಕನ್ನಡಿಗರು ಶಾಂತಿ ಕಾಪಾಡಿಕೊಳ್ಳುವಂತೆ ಮನವಿ ಮಾಡುತ್ತೇನೆ ಎಂದರು.










