ತೆಲಂಗಾಣ: ಗಂಡನ ಕಷ್ಟ, ಸುಖದಲ್ಲಿ ಜತೆಗಿರಬೇಕಿದ್ದ ಪತ್ನಿ, ಗಂಡನೇ ತನಗೆ ಕಷ್ಟವೆಂಬ ನಿರ್ಧಾರಕ್ಕೆ ಬಂದು ಅಳಿಯನ ಜತೆ ಸೇರಿ ಕೊಲೆ ಮಾಡಿರುವ ಘಟನೆ ತೆಲಂಗಾಣದ ಮೇಡಕ್ನಲ್ಲಿ ನಡೆದಿದೆ. ಪತಿ ಹೊಲಕ್ಕೆ ಹೋದಾಗ ಬಿದ್ದು ಸೊಂಟ ಮುರಿದುಕೊಂಡಿದ್ದ. ವೈದ್ಯರು ಶಸ್ತ್ರಚಿಕಿತ್ಸೆ ಮಾಡಬೇಕು ತುಂಬಾ ಹಣ ಖರ್ಚಾಗುವುದು ಎಂದು ಹೇಳಿದ್ದರು. ತನ್ನ ಗಂಡನ ಚಿಕಿತ್ಸೆಗೆ ಎಲ್ಲಿಂದ ಹಣವನ್ನು ಒಟ್ಟಿಗೂಡಿಸುವುದು ಎನ್ನುವ ಗೊಂದಲದಲ್ಲಿ ಗಂಡನನ್ನೇ ಹತ್ಯೆ ಮಾಡಿರುವ ವಿಚಿತ್ರ ಘಟನೆ ಇದಾಗಿದೆ. ಅಂತ್ಯಕ್ರಿಯೆಯ ಸಮಯದಲ್ಲಿ ಮೃತದೇಹದ ಕುತ್ತಿಗೆಯಲ್ಲಿ ಗಾಯಗಳನ್ನು ಗಮನಿಸಿದ ಸಂಬಂಧಿಕರು ಪೆÇಲೀಸರಿಗೆ ಮಾಹಿತಿ ನೀಡಿದಾಗ ಸತ್ಯ ಬೆಳಕಿಗೆ ಬಂದಿದೆ. ಪಾಪಣ್ಣಪೇಟೆ ಮಂಡಲದ ಬಚಾರಂ ಗ್ರಾಮದ ಆಶಯ್ಯ ಮತ್ತು ಶಿವಮ್ಮ ದಂಪತಿಗೆ ಲಾವಣ್ಯ ಎಂಬ ಮಗಳು ಮತ್ತು ಶಿವಕುಮಾರ್ ಎಂಬ ಮಗನಿದ್ದ.
ಅವರಿಗೆ ಒಂದೂವರೆ ಎಕರೆ ಜಮೀನಿತ್ತು ಆದರೆ ಅಲ್ಲಿ ಬೆಳೆ ಬೆಳೆಯಲು ವಿಫಲವಾದಾಗ, ಕೆಲವು ವರ್ಷಗಳ ಹಿಂದೆ ಅವರು ಹೈದರಾಬಾದ್ ನಗರಕ್ಕೆ ಕಾರ್ಮಿಕರಾಗಿ ವಲಸೆ ಬಂದರು. ಅವರ ಮಗ ಕೆಲವು ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಇದಾದ ಬಳಿಕ ಅವರು ತಮ್ಮ ಊರಿಗೆ ಮರಳಿದರು. ಅವರು ತಮ್ಮ ಮಗಳು ಲಾವಣ್ಯಳನ್ನು ಜುಕಲ್ನ ರಮೇಶ್ಗೆ ಮದುವೆ ಮಾಡಿ ಮನೆಗೆ ಕರೆತಂದರು. ಆಶಯ್ಯ ಗ್ರಾಮದಲ್ಲಿ ದನಗಳನ್ನು ಮೇಯಿಸುತ್ತಿದ್ದ. ಇತ್ತೀಚೆಗೆ ತಮ್ಮ ಹೊಲದಲ್ಲಿ ಬಾವಿ ತೋಡಿ, ಆ ಭೂಮಿಯನ್ನು ಕೃಷಿಗಾಗಿ ಪರಿವರ್ತಿಸಿದ್ದ. ಆಶಯ್ಯ ಹೊಲದಲ್ಲಿ ಕೆಲಸ ಮಾಡುವಾಗ ಜಾರಿಬಿದ್ದು ಸೊಂಟ ಮುರಿದುಕೊಂಡರು. ವೈದ್ಯರು ಆಶಯ್ಯನ ಶಸ್ತ್ರಚಿಕಿತ್ಸೆಗೆ 50 ಸಾವಿರ ರೂಪಾಯಿ ವೆಚ್ಚವಾಗುತ್ತದೆ ಎಂದು ಹೇಳಿದ್ದರು. ಮನೆಗೆ ಹಿಂದಿರುಗಿದ ನಂತರ, ಆಶಯ್ಯನ ಪತ್ನಿ ಮತ್ತು ಇತರ ಕುಟುಂಬ ಸದಸ್ಯರು ವೈದ್ಯಕೀಯ ವೆಚ್ಚಗಳ ಬಗ್ಗೆ ಚರ್ಚಿಸಿದ್ದಾರೆ.
ಮಧ್ಯರಾತ್ರಿ ಶಿವಮ್ಮ, ತನ್ನ ಅಳಿಯ ರಮೇಶ್ ಜೊತೆ ಸೇರಿ, ಆಶಯ್ಯನನ್ನು ಮಲಗಿದ್ದಾಗ ಟವೆಲ್ನಿಂದ ಕುತ್ತಿಗೆಗೆ ಕಟ್ಟಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಆಶಯ್ಯ ನಿದ್ರೆ ಮಾಡುವಾಗಲೇ ಮೃತಪಟ್ಟಿದ್ದಾರೆ ಎಂದು ಸಂಬಂಧಿಕರಿಗೆ ತಿಳಿಸಲಾಯಿತು. ಆಶಯ್ಯನ ದೇಹವನ್ನು ಅಂತ್ಯಕ್ರಿಯೆಗಾಗಿ ತೆಗೆದುಕೊಂಡು ಹೋಗುತ್ತಿದ್ದಾಗ, ಪೊಲೀಸರು ಅನಿರೀಕ್ಷಿತವಾಗಿ ಶವವನ್ನು ತಮ್ಮ ವಶಕ್ಕೆ ಪಡೆದರು. ಮೃತರ ಸಹೋದರಿ ಗಂಗಾಮಣಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.










