ಡಿ.26ರಂದು ಯುವನಿಧಿ ಯೋಜನೆ ನೋಂದಣಿಗೆ ಚಾಲನೆ: ಸಚಿವ ಶರಣಪ್ರಕಾಶ್ ಪಾಟೀಲ್.

44
firstsuddi

ಬೆಂಗಳೂರು: ಡಿ.26 ರಂದು ಯುವನಿಧಿ ಯೋಜನೆ ನೋಂದಣಿ ಪ್ರಕ್ರಿಯೆಗೆ ಚಾಲನೆ ಸಿಗಲಿದ್ದು, ವಿವೇಕಾನಂದ ಜಯಂತಿ ದಿನ ಶಿವಮೊಗ್ಗದಲ್ಲಿ ಯುವನಿಧಿ ಗ್ಯಾರಂಟಿ ಹಣ ವರ್ಗಾವಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದೇವೆ ಎಂದು ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಡಿಸೆಂಬರ್ 26 ರಂದು ಸಿಎಂ ಸಿದ್ದರಾಮಯ್ಯ, ಯುವನಿಧಿ ಗ್ಯಾರಂಟಿ ಕಾರ್ಯಕ್ರಮದ ಲೋಗೋ ಅನಾವರಣ ಮಾಡಲಿದ್ದಾರೆ. ಪದವಿ ಮುಗಿಸಿದವರಿಗೆ 3,000 ರೂ., ಡಿಪ್ಲೊಮಾ ಮಾಡಿದವರಿಗೆ 2,000 ರೂ. ನಿರುದ್ಯೋಗ ಭತ್ಯೆ ನೀಡಲಿದ್ದೇವೆ. ಯುವನಿಧಿ ಕಾರ್ಯಕ್ರಮ ವಿಳಂಬ ಆಗಿಲ್ಲ. ಪದವಿ ಮುಗಿಸಿ ಆರು ತಿಂಗಳ ನಂತರ ಈ ಯೋಜನೆಯನ್ನು ಪಲಾನುಭವಿಗಳಿಗೆ ತಲುಪಿಸುವುದು ನಮ್ಮ ಉದ್ದೇಶ ಎಂದು ತಿಳಿಸಿದ್ದಾರೆ.

ಅಂದಹಾಗೆ ರಾಜ್ಯದಲ್ಲಿ ಯುವನಿಧಿ ಯೋಜನೆಗೆ ಅಂದಾಜು 5,29,153 ಫಲಾನುಭವಿಗಳನ್ನ ಗುರುತಿಸಲಾಗಿದ್ದು, 4,81,000 ಪದವೀಧರರು, 48,153 ಡಿಪ್ಲೊಮಾ ತೇರ್ಗಡೆಯಾದವರು ಇದ್ದಾರೆ. 2023-24 ರಲ್ಲಿ ನಿರುದ್ಯೋಗ ಭತ್ಯೆ ನೀಡಲು 250 ಕೋಟಿ ಅನುದಾನ ಮೀಸಲು ಇಡಲಾಗಿದೆ. ಅಲ್ಲದೆ ಈ ಯೋಜನೆಯ ಫಲಾನುಭವಿಗಳಾಗಲು ಕನ್ನಡಿಗರಾಗಿರಬೇಕು. ಆರು ವರ್ಷಗಳ ಕಾಲ ಕರ್ನಾಟಕದಲ್ಲಿ ವ್ಯಾಸಂಗ ಮಾಡಿರಬೇಕು ಎಂದು ಮಾಹಿತಿ ನೀಡಿದ್ದಾರೆ.

ಸೇವಾಸಿಂಧು ಪೋರ್ಟಲ್ ಮೂಲಕ ಇದಕ್ಕೆ ಅರ್ಜಿ ಸಲ್ಲಿಸಬಹುದು. ಪ್ರತಿ ತಿಂಗಳು ನಿರುದ್ಯೋಗಿ ಸ್ಥಿತಿಯ ಬಗ್ಗೆ ಮಾಹಿತಿಯನ್ನ ಆಧಾರ್ ಓಟಿಪಿ ಮೂಲಕ ಸ್ವಯಂ ಘೋಷಣೆ ಮಾಡಬೇಕು. ಅರ್ಹ ಅಭ್ಯರ್ಥಿಗಳ ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗಲಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಅಭ್ಯರ್ಥಿಗಳು ಯುವನಿಧಿಗೆ ಅರ್ಜಿ ಸಲ್ಲಿಸಲು ಕರ್ನಾಟಕ ಒನ್ ಬಾಪೂಜಿ ಸೇವಾ ಕೇಂದ್ರಗಳು. ಗ್ರಾಮ ಒನ್ ಕೇಂದ್ರಗಳನ್ನು ಬಳಸಿ ಅರ್ಜಿ ಸಲ್ಲಿಸಬಹುದು. ಪೋರ್ಟಲ್‌ನಲ್ಲಿ ಸಂಬಂಧಿಸಿದ ಎಲ್ಲಾ ದಾಖಲೆ ಸಲ್ಲಿಸಬೇಕು. ಎಸ್‌ಎಸ್‌ಎಲ್‌ಸಿ, ಪಿಯುಸಿ ಅಂಕಪಟ್ಟಿ, ಸಿಇಟಿ ಸಂಖ್ಯೆ, ರೇಷನ್ ಕಾರ್ಡ್, ಪದವಿ ಪ್ರಮಾಣ ಪತ್ರ ಅಥವಾ ತಾತ್ಕಾಲಿಕ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಹೇಳಿದ್ದಾರೆ.