ಧಾರವಾಡ : ಠಾಣಾಧಿಕಾರಿಯನ್ನು ಕರ್ತವ್ಯ ಲೋಪದಡಿ ಅಮಾನತುಗೊಳಿಸಿರುವ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ. ಗರಗ ಠಾಣೆಯ ಠಾಣಾಧಿಕಾರಿ ಸಮೀರ್ ಅವರನ್ನು ಧಾರವಾಡ ಎಸ್ಪಿ ಅಮಾನತುಗೊಳಿಸಿ ಆದೇಶಿಸಿದ್ದಾರೆ. ಗೌರಿ-ಗಣೇಶ ಹಬ್ಬದ ದಿನದಂದು ಸೂಕ್ಷ್ಮ ಪ್ರದೇಶವಾದ ಕೋಟೂರು ಗ್ರಾಮದಲ್ಲಿ ಗಣೇಶ ಪ್ರತಿಷ್ಟಾಪನೆಯ ದಿನ ಮೆರವಣಿಗೆ ತೆರಳುವಾಗ ಎರಡು ಗುಂಪುಗಳ ನಡುವೆ ಜಗಳವಾಗಿತ್ತು. ಸ್ಥಳಕ್ಕೆ ಮಧ್ಯರಾತ್ರಿ 2 ಗಂಟೆಗೆ ಎಸ್ಪಿ ವರ್ತಿಕಾ ಕಟಿಯಾರ್ ಅವರು ಭೇಟಿ ನೀಡಿ ಪಿಎಸ್ಐ ಸಮೀರ್ ಅವರಿಗೆ ಗಸ್ತು ತಿರುಗುವಂತೆ ಸೂಚನೆ ನೀಡಿ ಯಾವುದೇ ಅಹಿತಕರ ಘಟನೆಯಾಗದಂತೆ ನಿಗಾವಹಿಸುವಂತೆ ತಿಳಿಸಿದ್ದರು. ಆದರೆ ಮತ್ತೆ ಎಸ್ಪಿ 5ಗಂಟೆ ಸಮಯಕ್ಕೆ ಸ್ಥಳಕ್ಕೆ ಭೇಟಿ ನೀಡಿದಾಗ ಠಾಣಾಧಿಕಾರಿ ಸಮೀರ್ ಸ್ಥಳದಲ್ಲಿ ಇಲ್ಲದ್ದನ್ನು ಗಮನಿಸಿದ್ದು, ಕರ್ತವ್ಯ ಲೋಪದಡಿ ಠಾಣಾಧಿಕಾರಿಯನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.










