ಬೆಂಗಳೂರು: ನುಡಿದಂತೆ ನಡೆಯುತ್ತೇವೆ ಎನ್ನುವುದು ನಾವು ಜನತೆಗೆ ನೀಡಿರುವ ವಚನ. ನಾವು ಉಳಿದವರಂತೆ ವಚನ ಭ್ರಷ್ಟರಲ್ಲ, ವಚನ ಪಾಲಕರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ಅವರು, ನಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ಐದಕ್ಕೆ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಜನರಿಗೆ ಕೊಟ್ಟ ಮಾತು ಉಳಿಸಿಕೊಳ್ಳುವುದು ಜನರಿಂದ ಆಯ್ಕೆಯಾದ ಒಂದು ಸರ್ಕಾರದ ಕರ್ತವ್ಯ. ಈ ಯೋಜನೆಗಳು ದುರುಪಯೋಗ ಆಗದಂತೆ ಪೂರ್ಣ ಪ್ರಮಾಣದಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕಿರುವುದು ನಿಮ್ಮೆಲ್ಲರ ಕರ್ತವ್ಯ ಎಂದಿದ್ದಾರೆ.
ನಿಮ್ಮದೇ ತೆರಿಗೆ ಹಣ, ನಿಮ್ಮದೇ ಕಲ್ಯಾಣ ಕಾರ್ಯಕ್ರಮಗಳು. ಇವು ಉಚಿತ ಯೋಜನೆಗಳು ಎಂಬ ತಪ್ಪು ಕಲ್ಪನೆ ಬೇಡ. ಗ್ಯಾರಂಟಿಗಳ ಪ್ರತಿ ಪೈಸೆಯೂ ನಿಮ್ಮ ಬದುಕಿಗೆ ಸದುಪಯೋಗವಾಗಬೇಕು. ಚುನಾವಣಾ ಪ್ರಣಾಳಿಕೆಯನ್ನು ಚುನಾವಣಾ ಪ್ರಚಾರಕ್ಕೆ ಸೀಮಿತಗೊಳಿಸದೆ ಅದನ್ನು ಕಾರ್ಯರೂಪಕ್ಕೆ ತಂದು ಜನರ ಬದುಕಲ್ಲಿ ಅವುಗಳ ಪ್ರತಿಫಲ ಕಾಣಬೇಕು ಎಂಬ ಆಶಯ ನಮ್ಮದು. ನಮ್ಮ ಸರ್ಕಾರದ ಸದಾಶಯಕ್ಕೆ ತಮ್ಮೆಲ್ಲರ ಬೆಂಬಲವಿರಲಿ. ಗ್ಯಾರಂಟಿಗಳ ಗೆಲುವು, ಕರ್ನಾಟಕದ ಗೆಲುವು, ನಿಮ್ಮೆಲ್ಲರ ಗೆಲುವು ಎಂದು ಸಿಎಂ ಟ್ವೀಟ್ ಮೂಲಕ ತಿಳಿಸಿದ್ದಾರೆ.










