ಹಾವೇರಿ : ಪಬ್ಜಿ ಗೇಮ್ ಆಡಲು ರೀಚಾರ್ಜ್ ಮಾಡಿಸಲು ತಂದೆ ಹಣ ನೀಡಲಿಲ್ಲ ಎಂದು ಮನನೊಂದು ಯುವಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಸಂಗೂರ ಗ್ರಾಮದಲ್ಲಿ ನಡೆದಿದೆ. ತೇಜಸ್ ಸಿಡ್ಲಾಪುರ(17) ಆತ್ಮಹತ್ಯೆ ಮಾಡಿಕೊಂಡ ಯುವಕ. ಪ್ರತಿದಿನ ಪಬ್ಜಿ ಗೇಮ್ನಲ್ಲಿ ನಿರತನಾಗಿದ್ದ ಯುವಕ ಮೊಬೈಲ್ನಲ್ಲಿ ಇಂಟರ್ನೆಟ್ ಖಾಲಿ ಆಗಿದ್ದರಿಂದ ತಂದೆ ಬಳಿ ರೀಚಾರ್ಜ್ ಮಾಡಿಸುವಂತೆ ಕೇಳಿಕೊಂಡಿದ್ದಾನೆ. ಆದರೆ ತಂದೆ ರೀಚಾರ್ಜ್ ಮಾಡಿಸುವುದಿಲ್ಲ ಪಬ್ಜಿ ಆಡುವುದನ್ನು ಬಿಡು ಎಂದು ಬೈದಿದ್ದಾರೆ. ಇದರಿಂದ ಮನನೊಂದ ಯುವಕ ಆಗಸ್ಟ್ 31ರಂದು ವಿಷ ಸೇವಿಸಿದ್ದನು. ಬಳಿಕ ಕುಟುಂಬಸ್ಥರು ಕೂಡಲೇ ಯುವಕನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಯುವಕ ಚಿಕಿತ್ಸೆ ಫಲಕಾರಿಯಾಗದೆ ಇಂದು ಆಸ್ಪತ್ರೆಯಲ್ಲೇ ಮೃತಪಟ್ಟಿದ್ದು, ಈ ಕುರಿತು ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










