ಬಜೆಟ್ ಮೊತ್ತ ನೋಡಿ ಬಿಜೆಪಿಗರಿಗೆ ಕುಳಿತುಕೊಳ್ಳಲು ಆಗದೆ, ಇಂಥ ಬಜೆಟ್ ಕೊಡಲು ಆಗಲಿಲ್ಲ ಎಂದು ಕೈ ಹಿಸುಕಿಕೊಂಡ್ರು: ಡಿಕೆಶಿ

47
firstsuddi

ಬೆಂಗಳೂರು: ಬಜೆಟ್ ಮೊತ್ತ 3 ಲಕ್ಷ ಕೋಟಿ 71 ಸಾವಿರ ರೂ. ಮುಟ್ಟಿದ್ದು, ಈ ನಂಬರ್ ನೋಡಿ ವಿರೋಧ ಪಕ್ಷದವರು ಕುಳಿತುಕೊಳ್ಳಲು ಆಗದೆ, ಇಂಥ ಬಜೆಟ್ ಕೊಡಲು ಆಗಲಿಲ್ಲ ಎಂದು ಕೈ ಹಿಸುಕಿಕೊಂಡ್ರು ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಬಿಜೆಪಿಗರ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಬಜೆಟ್ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಬಜೆಟ್‍ಗೆ ಅವಮಾನ ಮಾಡಿ ಹೋಗಿರಲಿಲ್ಲ. ಬಜೆಟ್ ಬೈಕಾಟ್ ಮಾಡೋದು ರಾಜ್ಯದ ಜನತೆಗೆ ಮಾಡಿದ ಅವಮಾನವಾಗಿದೆ. ಅಲ್ಲದೇ ಅನ್ನಭಾಗ್ಯ, ಗೃಹಜ್ಯೋತಿ, ಫಲಾನುಭವಿಗಳಿಗೆ, ಫ್ರೀಯಾಗಿ ಬಸ್ಸಲ್ಲಿ ಓಡಾಡುವವರಿಗೆ ಹಾಗೂ ಸಂವಿಧಾನಕ್ಕೆ ಮಾಡಿದ ಅವಮಾನ ಎಂದು ಕಿಡಿಕಾರಿದ್ದಾರೆ.

ಈ ಬಜೆಟ್ ಜನರ ಬದುಕನ್ನು ಬದಲಾಯಿಸುವ ಬಜೆಟ್ ಆಗಿದೆ. ನೀರಾವರಿ, ಕಳಸಾ ಬಂಡೂರಿಗೆ ಟೆಂಡರ್ ಕರೆದಿದ್ದೇವೆ, ಬೆಂಗಳೂರಿನ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ, ಬೆಂಗಳೂರಿಗೆ ಐದು ಟೌನ್ ಶಿಪ್ ಕೊಟ್ಟಿದ್ದೇವೆ. ಜನರ ಮನೆ ಬಾಗಿಲಿಗೆ ಅಕ್ಕಿ ತಲುಪಿಸುತ್ತಿದ್ದೇವೆ ಎಂದು ಬಜೆಟ್‍ನ್ನು ಸಮರ್ಥಿಸಿಕೊಂಡಿದ್ದಾರೆ.

ಯಾರ ಮೇಲೂ ಹೆಚ್ಚಿಗೆ ತೆರಿಗೆ ಹೊಣೆ ಕೊಟ್ಟಿಲ್ಲ, ಗ್ಯಾರಂಟಿ ಸ್ಕೀಮ್ ಕೊಟ್ಟಿದ್ದೇವೆ. ನನ್ನ ಇಲಾಖೆ ಬಗ್ಗೆ ಮಾತನಾಡ್ತಾ ಇಲ್ಲ, ನಾನು ಸಮಗ್ರ ಕಲ್ಯಾಣ ಕರ್ನಾಟಕದವನು. ಇದು ರಾಜ್ಯದ ಬಜೆಟ್, ಇದರಿಂದ ಬಿಜೆಪಿ ಶಾಸಕರಿಗೂ ಖುಷಿಯಾಗಿದೆ ಅವರಿಗೆ ಹೇಳಿಕೊಳ್ಳಲು ಆಗಲ್ಲ ಎಂದಿದ್ದಾರೆ.

ನನ್ನ ಇಲಾಖೆ ಬಿಡಿ, ರಾಜ್ಯದ ಬಗ್ಗೆ ನೋಡಿ. ಯಡಿಯೂರಪ್ಪ ಅವರಿಂದ ಏನು ನಿರೀಕ್ಷೆ ಮಾಡಲು ಸಾಧ್ಯ. ಅವರ ಕ್ಷೇತ್ರಕ್ಕೂ ಮಾಡಿದ್ದೇವೆ. ಎಸ್.ಟಿ ಸೋಮಶೇಖರ್ ಸಹ 110 ಊರುಗಳಿಗೆ ನೀರು ಕೇಳಿದ್ರು, ಅವರಿಂದಲೇ ಸೇರಿಸಿದ್ದೇವೆ. ಇದು ಫಸ್ಟ್ ಕ್ಲಾಸ್ ಬಜೆಟ್ ಆಗಿದೆ. ನಮ್ಮಲ್ಲಿರೋ ಆರ್ಥಿಕ ಶಕ್ತಿ, ಆರ್ಥಿಕ ಶಿಸ್ತಿನ ಮೇಲೆ ಸಾಲ ಮಾಡಿದ್ದೇವೆ ಎಂದು ಸಮರ್ಥಿಸಿಕೊಂಡಿದ್ದಾರೆ.