ಚೆನ್ನೈ : ಎಐಎಡಿಎಂಕೆ ಪಕ್ಷದ ಧ್ವಜಕಂಬ ತನ್ನ ಮೇಲೆ ಬೀಳುತ್ತಿದ್ದನ್ನು ತಪ್ಪಿಸಲು ಹೋಗಿ ಮಹಿಳೆಯೊಬ್ಬರಿಗೆ ಟ್ರಕ್ ಗುದ್ದಿದ್ದು, ಪರಿಣಾಮ ಮಹಿಳೆಯ ಎರಡು ಕಾಲುಗಳಿಗೆ ಗಂಭೀರ ಗಾಯವಾಗಿರುವ ಘಟನೆ ತಮಿಳುನಾಡಿನ ಕೊಯಂಬತ್ತೂರಿನ ಹೆದ್ದಾರಿಯಲ್ಲಿ ನಡೆದಿದೆ. ವ್ಯವಹಾರ ಆಡಳಿತ ಪದವೀಧರೆಯಾಗಿದ್ದ ಅನುರಾಧ ರಾಜೇಶ್ವರಿ(30) ಎಂಬ ಮಹಿಳೆ ಎಂದಿನಂತೆ ತಮ್ಮ ಸ್ಕೂಟಿಯಲ್ಲಿ ಕಚೇರಿಗೆ ತೆರಳುತ್ತಿದ್ದ ವೇಳೆ ಎಐಡಿಎಂಕೆ ಪಕ್ಷದ ಧ್ವಜಕಂಬ ತನ್ನ ಮೇಲೆ ಬೀಳುತ್ತಿದೆ ಎಂಬುವುದನ್ನು ತಿಳಿದು ಅದರಿಂದ ತಪ್ಪಿಸಲು ಮುಂದಾಗಿದ್ದಾರೆ. ಈ ವೇಳೆ ವೇಗವಾಗಿ ಬಂದ ಟ್ರಕ್ ಸ್ಕೂಟಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಟ್ರಕ್ನ ಚಕ್ರ ಮಹಿಳೆಯ ಎರಡೂ ಕಾಲುಗಳ ಮೇಲೆ ಹರಿದು ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಲಾರಿ ಚಾಲಕನ ಅಜಾಗರೂಕತೆಯೇ ಈ ಘಟನೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.










