ಚಿತ್ರದುರ್ಗ : 7 ಲಕ್ಷ ಹಣ ಇಟ್ಟಿದ್ದ ಬ್ಯಾಗನ್ನು ಎಗರಿಸಿ ಕಳ್ಳ ಪರಾರಿಯಾಗಿರುವ ಘಟನೆ ಚಿತ್ರದುರ್ಗದ ಕೋಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಓಂಕಾರಪ್ಪ ಎಂಬುವವರಿಗೆ ಸೇರಿದ ಹಣ ಕಳ್ಳತನವಾಗಿದೆ. ಅಡಿಕೆ ಮಂಡಿಯಲ್ಲಿ ವ್ಯವಸ್ಥಾಪಕನಾಗಿದ್ದ ಓಂಕಾರಪ್ಪ ಅವರು ಇಂದು ಲಕ್ಷ್ಮಿಪೂಜೆ ಹಿನ್ನೆಲೆ, ಹಣವನ್ನು ಇಟ್ಟು ಪೂಜೆ ಮಾಡಲೆಂದು 7 ಲಕ್ಷ ಹಣವನ್ನು ಬ್ಯಾಗ್ ನಲ್ಲಿ ತುಂಬಿಕೊಂಡು ಮನೆಗೆ ತೆರಳುತ್ತಿದ್ದರು. ಬಳಿಕ ಹಣ ಇದ್ದ ಬ್ಯಾಗ್ ಅನ್ನು ಬೈಕ್ ಮೇಲೆಯೇ ಇಟ್ಟು ಹಬ್ಬಕ್ಕೆ ಸಾಮಾಗ್ರಿ ಖರೀದಿಸಲು ತೆರಳಿದ್ದಾರೆ. ಹಿಂದಿನಿಂದ ಓಂಕಾರಪ್ಪ ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದ ಖತರ್ನಾಕ್ ಕಳ್ಳ ಬೈಕ್ ಮೇಲೆ ಇಟ್ಟಿದ್ದ ಹಣದ ಬ್ಯಾಗ್ ಅನ್ನು ಕಳ್ಳತನ ಮಾಡಿ ಅಲ್ಲಿಂದ ಪರಾರಿಯಾಗಿದ್ದಾರೆ. ಹಣ ಕಳ್ಳತನವಾಗಿರುವ ದೃಶ್ಯ ಸ್ಥಳೀಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಈ ಕುರಿತು ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










