ಚಿಕ್ಕಮಗಳೂರು : ಪೊಲೀಸರ ಮೇಲೆ ವಾಹನ ಹತ್ತಿಸಲು ಬಂದ ದನಗಳ್ಳರ ಮೇಲೆ ಪೊಲೀಸರು ಗುಂಡು ಹಾರಿಸಿರುವ ಘಟನೆ ಜಿಲ್ಲೆಯ ತರೀಕೆರೆ ತಾಲ್ಲೂಕಿನ ಲಿಂಗದಹಳ್ಳಿ ಸಮೀಪದ ಪಿಳ್ಳೆ ಬೀರನಹಳ್ಳಿ ಗ್ರಾಮದಲ್ಲಿ ನಡೆದಿದೆ.
ದನದ ಕರುಗಳನ್ನು ಕಸಾಯಿ ಖಾನೆಗೆ ರವಾನಿಸಲಾಗುತ್ತಿದೆ ಎಂಬ ಖಚಿತ ಮಾಹಿತಿಯನ್ನು ತಿಳಿದ ಲಿಂಗದಹಳ್ಳಿ ಪೊಲೀಸರು ಸಂತವೇರಿ ಘಾಟ್ ಬಳಿ ಬ್ಯಾರಿಕೇಡ್ ಹಾಕಿಕೊಂಡು ವಾಹನ ಬರುವುದನ್ನು ನಿರೀಕ್ಷಿಸುತ್ತಿದ್ದ ವೇಳೆ ಚಿಕ್ಕಮಗಳೂರು ಕಡೆಯಿಂದ ಕರುವನ್ನು ತುಂಬಿಕೊಂಡು ಬರುತ್ತಿದ್ದ ಇನ್ನೋವಾ ಕಾರಿನಲ್ಲಿದ್ದ ಆರೋಪಿಗಳು ಬ್ಯಾರಿಕೇಡ್ ಅನ್ನು ಗುದ್ದಿಕೊಂಡು ತಪ್ಪಿಸಿಕೊಳ್ಳಲು ಮುಂದಾಗಿದ್ದಾರೆ. ಬಳಿಕ ಕೂಡಲೇ ಕಾರನ್ನು ಹಿಂಬಾಲಿಸಿಕೊಂಡು ಹೋದ ಸಬ್ ಇನ್ಸ್ ಪೆಕ್ಟರ್ ರಫೀಕ್ ಅವರು ಫೈರಿಂಗ್ ಮಾಡಿದ್ದು, ಗುಂಡಿನ ದಾಳಿಗೆ ಕಾರಿನ ಟೈರ್ ಸಿಡಿದ ಕಾರಣ ಆರೋಪಿಗಳು ಕಾರನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಈ ಘಟನೆ ಕುರಿತು ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.










