ಮೂಡಿಗೆರೆಯಲ್ಲಿ ನೂತನ ಪ್ರವಾಸಿ ಮಂದಿರ ನಿರ್ಮಾಣಕ್ಕೆ ಪಸ್ತಾವನೆ ಸಲ್ಲಿಸಲಾಗಿದೆ : ಶಾಸಕ ಎಂ.ಪಿ.ಕುಮಾರಸ್ವಾಮಿ.

308
firstsuddi

ಮೂಡಿಗೆರೆ : ಪಟ್ಟಣದ ಹೃದಯ ಭಾಗದಲ್ಲಿರುವ ಹಳೆಯ ಪ್ರವಾಸಿ ಮಂದಿರದ ಜೊತೆಗೆ ನೂತನ ಪ್ರವಾಸಿ ಮಂದಿರದ ನಿರ್ಮಾಣಕ್ಕೆ ಪಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರ ಅದಕ್ಕೆ ಅನುಮೋದನೆ ನೀಡಿದಲ್ಲಿ ಮೂಡಿಗೆರೆಯಲ್ಲಿ ಹೊಸ ಪ್ರವಾಸಿ ಮಂದಿರ ನಿರ್ಮಾಣವಾಗಲಿದೆ ಎಂದು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಹೇಳಿದರು.
ಚಿಕ್ಕಮಗಳೂರಿನಲ್ಲಿ ಜಿಲ್ಲಾಡಳಿತ ಮತ್ತು ಲೋಕೋಪಯೋಗಿ ಇಲಾಖೆಯ ಸಹಯೋಗದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಸಮಾರಂಭದಲ್ಲಿ ಅವರು ಈ ವಿಷಯ ತಿಳಿಸಿದರು. ಮೂಡಿಗೆರೆ ಪಟ್ಟಣಕ್ಕೆ ಸುಸುಜ್ಜಿತವಾದ ಪ್ರವಾಸಿ ಮಂದಿರದ ಅವಶ್ಯಕತೆ ಇದೆ. ಈಗಿರುವ ಪ್ರವಾಸಿ ಮಂದಿರವು ಇಂದಿನ ದಿನಗಳಿಗೆ ಚಿಕ್ಕದಾಗಿದ್ದು, ಹೆಚ್ಚಿನ ಪ್ರವಾಸಿಗರು ಉಳಿದುಕೊಳ್ಳುವುದಕ್ಕೆ ಅನುಕೂಲಕರವಾಗಿಲ್ಲ. ಮೂಡಿಗೆರೆ ತಾಲ್ಲೂಕು ಪ್ರಕೃತಿ ಸಹಜವಾದ ಸೌಂದರ್ಯದಿಂದ ಕೂಡಿರುವುದರಿಂದ ಪ್ರತೀ ವರ್ಷ ಪ್ರವಾಸಿಗರ ಆಗಮದಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿದೆ. ಪಟ್ಟಣದಲ್ಲಿ ಸರಿಯಾದ ವಿಶ್ರಾಂತಿ ಗೃಹಗಳ ಕೊರೆತೆ ಇರುವುದರಿಂದ ಚಿಕ್ಕಮಗಳೂರು ನಗರ ಇಲ್ಲವೇ ತಾಲ್ಲೂಕಿನ ರಸಾರ್ಟ್ ಅಥವಾ ಹೋಂ ಸ್ಟೇಗಳಲ್ಲಿ ಉಳಿದುಕೊಳ್ಳುವ ಪರಿಸ್ಥಿತಿ ಇದೆ.
ಪ್ರವಾಸಿ ಮಂದಿರದ ನಿರ್ಮಾಣಕ್ಕೆ ರೂ.5 ಕೋಟಿ ಅನುದಾನ ನೀಡುವುದರ ಜೊತೆಗೆ, ಮೂಡಿಗೆರೆ ಕ್ಷೇತ್ರದಲ್ಲಿ ಈ ಬಾರಿಯ ಅತೀವೃಷ್ಟಿಯಿಂದಾಗಿ ಕೊಚ್ಚಿಕೊಂಡು ಹೋಗಿರುವ ಮೂರು ಪ್ರಮುಖ ಸೇತುವೆಗಳ ನಿರ್ಮಾಣಕ್ಕೆ ಕೂಡ ಅನುದಾನ ಬಿಡುಗಡೆ ಮಾಡಿಕೊಡಬೇಕು. ಇದೆಲ್ಲವಕ್ಕೂ ಮಾನ್ಯ ಮುಖ್ಯಮಂತ್ರಿಗಳು ಅನುದಾನ ಬಿಡುಗಡೆ ಮಾಡಿಕೊಡುತ್ತಾರೆ ಎನ್ನುವ ವಿಶ್ವಾಸ ಇದೆ. ಈ ಬಗ್ಗೆ ನೇರವಾಗಿ ಅವರ ಬಳಿಯಲ್ಲಿಯೇ ಚರ್ಚಿಸಲಾಗುವುದು ಎಂದು ತಿಳಿಸಿದರು. ಮಲೆನಾಡು ಭಾಗದಲ್ಲಿ ಪರಿಭಾವಿತ (ಡೀಮ್ಡ್ ಫಾರೆಸ್ಟ್) ಅರಣ್ಯ ಸಮಸ್ಯೆ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆ ಉಂಟುಮಾಡುತ್ತಿದೆ. ಅಧಿಕಾರಿಗಳ ದೂರದರ್ಶಿತ್ವದ ಕೊರತೆಯಿಂದಾಗಿ ಆಸ್ಪತ್ರೆ, ಶಾಲೆ, ಕ್ರೀಡಾಂಗಣ, ಅಂಗನವಾಡಿಗಳು ಇವೇ ಮೊದಲಾದ ಮೂಲಭೂತ ಸೌಕರ್ಯಗಳನ್ನು ನಿರ್ಮಾಣ ಮಾಡಲು ತೊಡಕುಂಟಾಗುತ್ತಿದೆ. ಈ ಸೂಕ್ಷ್ಮ ಸಮಸ್ಯೆಗೆ ಪರಿಹಾರ ಒದಗಿಸುವಲ್ಲಿ ಅಧಿಕಾರಿಗಳು ಎಚ್ಚರವಹಿಸಬೇಕು ಎಂದರು.
ರಾಜಕೀಯ ಹಗ್ಗ ಜಗ್ಗಾಟಗಳಿಂದಾಗಿ ಜಿಲ್ಲಾ ಪಂಚಾಯತಿಯಿಂದ ಮೂಡಿಗೆರೆ ಕ್ಷೇತ್ರಕ್ಕೆ ಯಾವ ಅನುದಾನವೂ ಬಂದಿರಲಿಲ್ಲ. ಮಾನ್ಯ ಮುಖ್ಯಮಂತ್ರಿಗಳು ಅಧಿಕಾರ ಸ್ವೀಕಾರ ಮಾಡಿದ ಒಂದೇ ತಿಂಗಳಿನಲ್ಲಿ 111 ಕೋಟಿ ರೂಪಾಯಿಗಳ ಅನುದಾನ ಬಿಡುಗಡೆ ಮಾಡಿದ್ದರು. ಗ್ರಾಮೀಣಾಭಿವೃದ್ಧಿ ಸಚಿವರು ಇದೀಗ 30 ಕೋಟಿ ರೂ. ಅನುದಾನ ಮಂಜೂರು ಮಾಡಿ ಕ್ಷೇತ್ರದ ಕೆಲಸಗಳಿಗೆ ಸಹಾಯ ಮಾಡಿದ್ದಾರೆ ಎಂದರು.