ಬೆಂಗಳೂರು: ರಾಜ್ಯದ ಗೌರವ ಎಲ್ಲಿಗೆ ತೆಗೆದುಕೊಂಡು ಹೋಗ್ತಿದ್ದಾರೆ? ಈ ರಾಜ್ಯದ ಸರ್ಕಾರವನ್ನ ಭಿಕ್ಷುಕರ ಸರ್ಕಾರವನ್ನಾಗಿ ಮಾಡಲು ಹೊರಟಿದ್ದಿರಾ? ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೆಲವರು ಮನೆಗಳ ಮುಂದೆ ಹೋದಾಗ ರಾತ್ರಿ ಊಟ ಉಳಿದಿದ್ರೆ ಕೊಡಿ ಅಂತಾ ಭಿಕ್ಷೆ ಕೇಳ್ತಾರೆ, ಅದೇ ರೀತಿ ಸಿಎಂ ಕೇಳ್ತಿದ್ದಾರೆ. ಹಸಿವನ್ನ ನೀಗಿಸಿಕೊಳ್ಳಲು ಹೋಗುವ ಜನ ಅಮ್ಮಾ.. ತಾಯಿ ಕೊಡಿ ಅಂತಾ ಕೇಳ್ತಾರೆ ಎಂದು ಲೇವಡಿ ಮಾಡಿದರು.
ರಾಜ್ಯದ ಮುಖ್ಯಮಂತ್ರಿ ಅಮ್ಮಾ.. ತಾಯಿ.. ಅಂತಾ ದಯನೀಯ ಸ್ಥಿತಿಯಲ್ಲಿ ಬೇಡುವ ಸನ್ನಿವೇಶ ಉದ್ಭವವಾಗಿದೆ. ಏತಕ್ಕಾಗಿ ಇಂತಹ ಪರಿಸ್ಥಿತಿಯನ್ನ ತಂದುಕೊಂಡಿದ್ದೀರಾ? ಈ ರಾಜ್ಯದ ಸರ್ಕಾರವನ್ನ ಭಿಕ್ಷುಕರ ಸರ್ಕಾರವನ್ನಾಗಿ ಮಾಡಲು ಹೊರಟಿದ್ದೀರಾ? ಅಂತ ಪ್ರಶ್ನೆ ಮಾಡಿದರು. ಕೇಂದ್ರ ಸರ್ಕಾರದ ವಿರುದ್ಧ ಬಿಲ್ ಬೇರೆ ಪಾಸ್ ಮಾಡಿದ್ದೀರಿ, ನಾಚಿಕೆ ಆಗಬೇಕು ನಿಮಗೆ ಅಂತಾ ವಾಗ್ದಾಳಿ ನಡೆಸಿದರು.
ಕರ್ನಾಟಕ ಸಂಪತ್ ಭರಿತ ರಾಜ್ಯ. ಹಣದ ಕೊರತೆಯಿಲ್ಲ, ರಸ್ತೆ ತೆರಿಗೆ ಆದಾಯ ವಿಚಾರದಲ್ಲಿ ಕರ್ನಾಟಕ ದೇಶದಲ್ಲೇ ನಂ.1 ಸ್ಥಾನದಲ್ಲಿದೆ. ಸ್ವಂತ ಟ್ಯಾಕ್ಸ್ ಕಲೆಕ್ಟ್ ಮಾಡೋದ್ರಲ್ಲಿ ಮೊದಲನೆ ಸ್ಥಾನದಲ್ಲಿದ್ದೇವೆ, ಹಣದ ಕೊರತೆಯಿಲ್ಲ. ಆದ್ರೆ ನಿಮ್ಮ ಲೂಟಿಯ ದಾಹಕ್ಕೆ ರಾಜ್ಯದ ಖಜಾನೆ ಖಾಲಿ ಮಾಡ್ತಿದ್ದೀರಾ? ಕೇಂದ್ರ ಸರ್ಕಾರದ ಮುಂದೆ ಪದೇ ಪದೇ ಕೆದಕಿಕೊಂಡು ಹೋಗ್ತಾ ಇದ್ದೀರಿ. ಇದು ರಾಜ್ಯದ ಜನತೆಗೆ ಅವಮಾನ. ಇದು ಸಿಎಂಗೆ ಶೋಭೆ ತರುವಂತದಲ್ಲ ಎಂದು ಮಾಜಿ ಸಿಎಂ ಹೆಚ್ಡಿಕೆ ಆಕ್ರೋಶ ಹೊರಹಾಕಿದರು.










