ಬೆಂಗಳೂರು: ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಏಪ್ರಿಲ್ 26 ರಂದು ಮೆಟ್ರೋ ಸೇವೆ ವಿಸ್ತರಣೆ ಮಾಡಲಾಗಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ಎಲ್ಲಾ ನಾಲ್ಕು ಟರ್ಮಿನಲ್ ಅಂದರೆ, ನಾಗಸಂದ್ರ, ರೇಷ್ಮೆ ಸಂಸ್ಥೆ, ಚಲ್ಲಘಟ್ಟ, ವೈಟ್ ಫೀಲ್ಡ್ (ಕಾಡುಗೋಡಿ) ನಿಲ್ದಾಣಗಳಿಂದ ಕೊನೆಯ ರೈಲು ಸೇವೆಯನ್ನು ರಾತ್ರಿ 11.55 ರವರೆಗೆ ವಿಸ್ತರಿಸಲಾಗಿದೆ.
ಈ ನಾಲ್ಕು ಟರ್ಮಿನಲ್ ಗಳಿಂದ ಸಾಮಾನ್ಯ ದಿನಗಳಲ್ಲಿ ರಾತ್ರಿ 11 ಗಂಟೆಗೆ ಕೊನೆಯ ರೈಲು ಹೊಡುತ್ತಿತ್ತು. ಟರ್ಮಿನಲ್ಗಳಾದ ನಾಗಸಂದ್ರ, ರೇಷ್ಮೆ ಸಂಸ್ಥೆ, ಚಲ್ಲಘಟ್ಟ ಹಾಗೂ ವೈಟ್ಫಿಲ್ಡ್ನಿಂದ ಶುಕ್ರವಾರ ಕೊನೆಯ ರೈಲು ರಾತ್ರಿ 11:55ಕ್ಕೆ ಹೊರಡಲಿದೆ (ಪ್ರತಿದಿನ 11:15) ಎಂದು ಬಿಎಂಆರ್ಸಿಎಲ್ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.
ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್ನಿಂದ ಎಲ್ಲಾ ನಾಲ್ಕು ದಿಕ್ಕುಗಳಿಗೆ ಕೊನೆಯ ರೈಲು ಏಪ್ರಿಲ್ 26 ರಂದು ಮಧ್ಯರಾತ್ರಿ 12.35 ಕ್ಕೆ ಹೊರಡಲಿದೆ. ಸಾಮಾನ್ಯ ದಿನಗಳಲ್ಲಿ ಮೆಜೆಸ್ಟಿಕ್ನಿಂದ ರಾತ್ರಿ 11.30ಕ್ಕೆ ಕೊನೆಯ ರೈಲು ಹೊರಡುತ್ತದೆ. ಇನ್ನು ಮತದಾನಕ್ಕೆ ಊರುಗಳಿಗೆ ತೆರಳಿರುವವರು, ಇತರೆ ಎಲ್ಲಾ ಪ್ರಯಾಣಿಕರು ಈ ಸೌಲಭ್ಯವನ್ನು ಬಳಸಿಕೊಳ್ಳುವಂತೆ ನಮ್ಮ ಮೆಟ್ರೋ ಕೋರಿದೆ.
ಈ ಮೊದಲಿನಿಂದಲೂ ಮೆಟ್ರೋ, ಪ್ರಯಾಣಿಕರಿಗೆ ಅನುಕೂಲವಾಗುವಂತೆ ಹಬ್ಬಗಳು, ಕ್ರಿಕೆಟ್ ಹಾಗೂ ಇನ್ನಿತರ ವಿಶೇಷ ಸಂದರ್ಭಗಳಲ್ಲಿ ಮೆಟ್ರೋ ಸಂಚಾರ ಅವಧಿಯನ್ನು ವಿಸ್ತರಣೆಯನ್ನು ಮಾಡುತ್ತಲೇ ಬಂದಿದೆ. ಅದರಂತೆ ಏ.26 ರಂದು ಲೋಕಸಭಾ ಚುನಾವಣೆ ಮತದಾನ ಇರುವ ಹಿನ್ನಲೆ ಮಧ್ಯರಾತ್ರಿವರೆಗೆ ಸಂಚಾರ ಅವಧಿಯನ್ನು ವಿಸ್ತರಿಸಿದೆ.










