ಚಿಕ್ಕೋಡಿ (ಬೆಳಗಾವಿ): ಜಿಲ್ಲೆಯ ಅಥಣಿಯಲ್ಲಿ ತಂದೆ ಮತ್ತು ಮಗನಿಗೆ ವಿದ್ಯುತ್ ತಗುಲಿ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಸಂಭವಿಸಿದೆ.
ಜಿಲ್ಲೆಯ ಅಥಣಿ ತಾಲೂಕಿನ ಚಿಕ್ಕಟ್ಟಿ ಗ್ರಾಮದ ಮಲ್ಲಿಕಾರ್ಜುನ ಸದಾಶಿವ ಪೂಜಾರಿ (32) ಹಾಗೂ ಪ್ರೀತಮ್ ಮಲ್ಲಿಕಾರ್ಜುನ ಪೂಜಾರಿ (7) ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ನಿನ್ನೆ ಮಧ್ಯಾಹ್ನ ಮಲ್ಲಿಕಾರ್ಜುನ ತೋಟದಲ್ಲಿ ಬೋರ್ವೆಲ್ ಮೋಟಾರ್ ಆನ್ ಮಾಡಿ ಬೇರೆ ಕಡೆ ನೀರು ತಿರುವಿಗೆ (ವಾಲ್ ಟರ್ನ್) ಮುಂದಾಗಿದ್ದಾರೆ. ಆದರೆ ಬೋರ್ವೆಲ್ ಹತ್ತಿರ ವೈರ್ ತುಂಡಾಗಿದ್ದು ಗಮನಿಸದೇ ವಿದ್ಯುತ್ ಕೈಗೆ ತಗುಲಿ ಸಾವು ಸಂಭವಿಸಿದೆ. ತಂದೆಯನ್ನು ಉಳಿಸಲು ಹೋಗಿ ಮಗ ಪ್ರೀತಮ್ ಕೂಡ ಸ್ಥಳದಲ್ಲಿ ಮೃತಪಟ್ಟಿದ್ದಾನೆ.
ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.










