ಮಂಗಳೂರು : ನಗರದ ಕೆ.ಎಸ್.ರಾವ್ ರಸ್ತೆಯಲ್ಲಿರುವ ಲಾಡ್ಜೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಆರೋಪದಲ್ಲಿ ಮಂಗಳೂರು ಉತ್ತರ (ಬಂದರು) ಪೊಲೀಸರು ದಾಳಿ ನಡೆಸಿ ನಾಲ್ವರು ಮಹಿಳೆಯರನ್ನು ರಕ್ಷಿಸಿದ್ದಾರೆ. ಲಾಡ್ಜ್ ಮಾಲಕ ಸಹಿತ ಐವರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಲಾಡ್ಜ್ ಮಾಲಕ ಮೋಹನ್, ಮ್ಯಾನೇಜರ್ ಅಬ್ದುಲ್ ಬಶೀರ್, ರೂಮ್ ಬಾಯ್ ಉದಯ ಶೆಟ್ಟಿ, ಗಿರಾಕಿಗಳಾದ ಭರತ್ ಮತ್ತು ಬಾಲಕೃಷ್ಣ ಬಂಧಿತರು. ವೇಶ್ಯಾವಾಟಿಕೆಗೆ ಮಹಿಳೆಯರನ್ನು ಕರೆ ತಂದಿದ್ದ ಆರೋಪಿ ಸುನಿಲ್ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಡಿಸಿಪಿಗಳಾದ ಹರಿರಾಂ ಶಂಕರ್, ವಿನಯ ಗಾಂವ್ಕರ್, ಎಸಿಪಿ ಜಗದೀಶ್, ಬಂದರು ಠಾಣೆ ಇನ್ಸ್ಪೆಕ್ಟರ್ ಗೋವಿಂದರಾಜು, ಪಿಎಸ್ಐಗಳಾದ ರೇವತಿ, ನಾಗರಾಜ್, ಜಗದೀಶ್ ಹಾಗು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.