ಬೆಂಗಳೂರು : ಸಮ್ಮಿಶ್ರ ಸರ್ಕಾರ ಇದ್ದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಸಾಲಮನ್ನಾ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದರು. ಈ ವೇಳೆ ಸಾಲಮನ್ನಾದಿಂದ ಪ್ರಯೋಜನ ಪಡೆದ ರೈತರೊಬ್ಬರು ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಪ್ರೀತಿಯಿಂದ ಒಂದು ಉಡುಗೊರೆಯನ್ನು ಕಳುಹಿಸಿಕೊಟ್ಟಿದ್ದಾರೆ. ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕು ಕಿರೇಸೂರು ಗ್ರಾಮದ ಗೋವಿಂದಪ್ಪ ಎಂಬ ರೈತ ಹೆಚ್ಚು ಸಾಲದಿಂದ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರು. ಈ ವೇಳೆ ಕುಮಾರಸ್ವಾಮಿ ಅವರಿಗೆ ಪತ್ರ ಬರೆಯುವ ಮೂಲಕ ತಮ್ಮ ಅಳಲನ್ನು ತೋಡಿಕೊಂಡಿದ್ದರು. ರೈತನ ಪತ್ರಕ್ಕೆ ಸ್ಪಂಧಿಸಿದ ಕುಮಾರಸ್ವಾಮಿ ಅವರು ಗೋವಿಂದಪ್ಪ ಅವರ ಸಾಲವನ್ನು ಮನ್ನಾ ಮಾಡಿದ್ದರು. ಹೀಗಾಗಿ ರೈತ ಗೋವಿಂದಪ್ಪ ಅವರು ತಮ್ಮ ನೆಲದಲ್ಲಿ ಬೆಳೆದ ಬೆಳೆಯಿಂದ ಜೋಳದ ರೊಟ್ಟಿ, ಚಟ್ನಿಪುಡಿ ಹಾಗೂ ಪಲ್ಯವನ್ನು ಮಾಡಿ ಕೊರಿಯರ್ ಮೂಲಕ ಹೆಚ್.ಡಿ. ಕುಮಾರಸ್ವಾಮಿ ಅವರ ನಿವಾಸಕ್ಕೆ ಉಡುಗೊರೆಯಾಗಿ ಕಳುಹಿಸಿದ್ದಾರೆ. ರೈತ ಗೋವಿಮದಪ್ಪ ಅವರ ಪ್ರೀತಿಯ ಉಡುಗೊರೆ ನೋಡಿ ಕುಮಾರಸ್ವಾಮಿ ಅವರು ಕೂಡಾ ಭಾವುಕರಾಗಿದ್ದಾರೆ.










