5 ವರ್ಷಗಳ ಕಾಲ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ಕೊಡುತ್ತೇವೆ: ಡಿಕೆಶಿ ಸ್ಪಷ್ಟನೆ…

42
firstsuddi

ಬೆಂಗಳೂರು: ಗ್ಯಾರಂಟಿ ಯೋಜನೆಗಳನ್ನು ರದ್ದು ಮಾಡುವುದಿಲ್ಲ. 5 ವರ್ಷಗಳ ಕಾಲ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ಕೊಡುತ್ತೇವೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಗ್ಯಾರಂಟಿ ಯೋಜನೆ ರದ್ದಾಗುತ್ತದೆ ಎಂಬ ಶಾಸಕ ಬಾಲಕೃಷ್ಣ ಅವರ ವಿವಾದಿತ ಹೇಳಿಕೆಗೆ ವಿವರಣೆ ನೀಡಿ ತೇಪೆ ಹಚ್ಚಿದ್ದಾರೆ. ಲೋಕಸಭಾ ಚುನಾವಣೆ ಆದ ಮೇಲೆ ಗ್ಯಾರಂಟಿ ಯೋಜನೆ ಕೊಡಲ್ಲ ಎಂಬುದನ್ನು ಬಾಲಕೃಷ್ಣ ಹೇಳಿರೋದಲ್ಲ. ಬಿಜೆಪಿಯವರು ಹಾಗೆ ಹೇಳಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಲೋಕಸಭಾ ಚುನಾವಣೆ ಬಳಿಕ ಗ್ಯಾರಂಟಿ ರದ್ದು ಮಾಡ್ತಾರೆ ಎಂದು ಬಿಜೆಪಿಯವರು ಹೇಳಿದ್ದಾರೆ. ನೀವು ಎಚ್ಚರಿಕೆಯಿಂದ ಇರಿ ಎಂದು ಬಾಲಕೃಷ್ಣ ಹೇಳಿದ್ದಾರೆ ಅಷ್ಟೇ ಎಂದು ಸಮಜಾಯಿಷಿ ನೀಡಿದ್ದಾರೆ. ಗ್ಯಾರಂಟಿ ಯೋಜನೆ ಕರ್ನಾಟಕದಲ್ಲಿ ರದ್ದು ಮಾಡೋದಿಲ್ಲ. ರಾಜ್ಯದಲ್ಲಿ 5 ವರ್ಷ ಗ್ಯಾರಂಟಿ ಯೋಜನೆ ಇರಲಿದೆ ಎಂದು ಅವರು ಭರವಸೆ ನೀಡಿದ್ದಾರೆ.