ಬೆಂಗಳೂರು: ಹುಡುಗಿಯ ವಿಚಾರಕ್ಕೆ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಗರದ 8ನೇ ಮೈಲಿಯ ಸೌಂದರ್ಯ ಪಿಯು ಕಾಲೇಜಿನಲ್ಲಿ ನಡೆದಿದೆ. ದಯಾಸಾಗರ್(18) ಮೃತ ವಿದ್ಯಾರ್ಥಿ. ರಕ್ಷಿತ್(18) ಚಾಕುವಿನಿಂದ ಇರಿದ ವಿದ್ಯಾರ್ಥಿ. ದಯಾಸಾಗರ್ ಹಾಗೂ ರಕ್ಷಿತ್ ಇಬ್ಬರು ಪಿಯುಸಿ ವಿದ್ಯಾರ್ಥಿಗಳಾಗಿದ್ದು, ವಿದ್ಯಾರ್ಥಿನಿಯೊಬ್ಬಳಿಗೆ ದಯಾ ಸಾಗರ್ ಮೆಸೇಜ್ ಮಾಡುತ್ತಿದ್ದ ಎಂದು ರಕ್ಷಿತ್ ಗುಂಪು ಕಟ್ಟಿಕೊಂಡು ವಾರ್ನ್ ಮಾಡಿದ್ದ ಎನ್ನಲಾಗಿದೆ. ಇದೆ ವಿಚಾರಕ್ಕೆ ಇಂದು ಕೂಡ ಶೌಚಾಲಯದಲ್ಲಿ ಇಬ್ಬರು ವಿದ್ಯಾರ್ಥಿಗಳ ನಡುವೆ ಜಗಳ ನಡೆದಿದ್ದು, ಜಗಳ ವಿಕೋಪಕ್ಕೆ ತಿರುಗಿದೆ. ಈ ಸಂದರ್ಭದಲ್ಲಿ ರಕ್ಷಿತ್ ತನ್ನ ಬ್ಯಾಗ್ ನಲ್ಲಿದ್ದ ಚಾಕುವನ್ನು ತೆಗೆದು ದಯಾಸಾಗರ್ ಇರಿದಿದ್ದಾನೆ. ತಕ್ಷಣ ದಯಾಸಾಗರ್ ನನ್ನು ಸಹಪಾಠಿಗಳು ಹಾಗೂ ಅಧ್ಯಾಪಕರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು, ಆದರೆ ತೀವ್ರ ರಕ್ತಸ್ರಾವದಿಂದ ಚಿಕಿತ್ಸೆ ಫಲಕಾರಿಯಾಗದೆ ದಯಾಸಾಗರ್ ಮೃತಪಟ್ಟಿದ್ದಾನೆ. ರಕ್ಷಿತ್ ಸೇರಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.










