ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರಣಿ ಟ್ವೀಟ್ ಮಾಡಿದ್ದು, ಕರಾವಳಿಯಲ್ಲಿ ಮೂರು ಮಂದಿ ಮತ್ತು ಮೈಸೂರಲ್ಲಿ ಒಬ್ಬ ಸಂಸದರಿದ್ದಾರೆ. ಇವರು ತಮ್ಮ ತಮ್ಮ ಕ್ಷೇತ್ರಗಳಿಗೆ ನೀಡಿದ ಕೊಡುಗೆ ಏನು? ಬೆಂಕಿ ಹಚ್ಚೋದಾ? ಕೋಮು ದಂಗೆ ಮಾಡಿಸೋದಾ? ಅಮಾಯಕರನ್ನು ಜೈಲಿಗೆ ಕಳಿಸೋದಾ? ಮುಂದಿನ ಲೋಕಸಭಾ ಚುನಾವಣೆಯಲ್ಲಿ ಈ ಪ್ರಶ್ನೆಯನ್ನು ಮತದಾರರು ಕೇಳಬೇಕು.
ಮಲ್ಪೆಯ ಮೀನುಗಾರರು ಸಮುದ್ರದಲ್ಲಿ ನಾಪತ್ತೆಯಾಗಿ ಎರಡುವರೆ ತಿಂಗಳ ಮೇಲಾಯಿತು. ಸಂಸದರಾದ ನಳಿನ್ಕುಮಾರ್ ಕಟೀಲ್ ಮತ್ತು ಶೋಭಾ ಕರಂದ್ಲಾಜೆ ಏನು ಮಾಡ್ತಿದ್ದಾರೆ? ಅವರನ್ನು ಪತ್ತೆ ಹಚ್ಚಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದ್ದಾರಾ? ಇಂತಹ ಪ್ರತಿನಿಧಿಗಳು ಬೇಕಾ? ಜನ ಯೋಚನೆ ಮಾಡಬೇಕು.
ಪುಲ್ವಾಮದಲ್ಲಿ ನಮ್ಮ೪೪ ವೀರಯೋಧರು ಹುತಾತ್ಮರಾಗಲು ಕೇಂದ್ರ ಸರ್ಕಾರದ ಇಂಟಲಿಜೆನ್ಸ್ ವೈಫಲ್ಯವೇ ಕಾರಣ. ನಮ್ಮ ‘ರಾ’, ‘ಐಬಿ’ ಏನು ಮಾಡ್ತಿತ್ತು? ಇದನ್ನು ಕೇಳೋದು ದೇಶದ್ರೋಹವಾಗುತ್ತಾ?
ನಮ್ಮ ವೀರಯೋಧರ ಬಗ್ಗೆ ನಮಗೆ ಗೌರವ-ಹೆಮ್ಮೆ ಇರಬೇಕು. ಅವರ ತ್ಯಾಗ-ಬಲಿದಾನಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ನೀಚತನ. ಈ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಪಕ್ಷದ ನಾಯಕರು ಮಾಡುತ್ತಿದ್ದಾರೆ. ಇದು ಸೇನೆಗೆ ಮಾಡುತ್ತಿರುವ ಅವಮಾನ.
ನರೇಂದ್ರ ಮೋದಿ ಒಬ್ಬ ವಿಫಲ ಪ್ರಧಾನಿ. ನುಡಿದಂತೆ ನಡೆದಿದ್ದೇನೆ ಎಂದು ಹೇಳುವ ಧೈರ್ಯ ಅವರಿಗಿಲ್ಲ. ತನ್ನ ವೈಫಲ್ಯಗಳನ್ನು ಮುಚ್ಚಿಹಾಕಲು ಅವರು ಧರ್ಮ, ದೇಶಭಕ್ತಿಯ ಹೆಸರಲ್ಲಿ ಜನರನ್ನು ಮರುಳು ಮಾಡಲು ಹೊರಟಿದ್ದಾರೆ. ಕಳೆದ ಬಾರಿಯಂತೆ ಅವರ ಬಣ್ಣದ ಮಾತುಗಳಿಗೆ ಮರುಳಾಗಬೇಡಿ. ಮೋದಿಯವರನ್ನು ಸೋಲಿಸಿ, ದೇಶವನ್ನು ಗೆಲ್ಲಿಸಿ ಎಂದು ಟ್ವಿಟ್ ಮಾಡಿದ್ದಾರೆ.










