ಹಾಸನ : ಸುದ್ದಿಗಾರರೊಂದಿಗೆ ಮಾತನಾಡಿದ ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಈಶ್ವರಪ್ಪ ಹಾಗೂ ಶ್ರೀರಾಮುಲು ಅವರು ರಾಜಕೀಯಕ್ಕೆ ಈಗಾ ತಾನೇ ಬಂದಿದ್ದಾರೆ. ಚುನಾವಣೆ ಬಳಿಕ ಮೈತ್ರಿ ಸರ್ಕಾರ ಪತನವಾಗುತ್ತದೆ ಎಂದು ಹೇಳುತ್ತಿದ್ದರು. ನಮ್ಮ ಸರ್ಕಾರವನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬುವುದು ನಮಗೆ ತಿಳಿದಿದೆ. ರಾಮೇಶ್ ಜಾರಕೀಹೊಳಿಯ ರಾಜೀನಾಮೆಯನ್ನು ಈಗಲೇ ಕೊಡಿಸಲಿ, ನಾವೇನು ಅವರನ್ನು ಹಿಡಿದುಕೊಂಡಿದ್ದೀವ?. ಯಾರೂ ಏನೇ ಮಾಡಿದರೂ ನಮ್ಮ ಸರ್ಕಾರಕ್ಕೆ ಏನೂ ಆಗುವುದಿಲ್ಲ. ಆಪರೇಶನ್ ಕಮಲನೂ ಇಲ್ಲ, ಹುಣಸೆ ಗಡ್ಡೆನೂ ಇಲ್ಲ ಎಂದು ಹೇಳಿದ್ದಾರೆ. ಬಿಜೆಪಿಯವರಲ್ಲಿ ರಾಮ ಭಜನೆ ಮುಗಿದು ಮೋದಿ ಭಜನೆ ಶುರುವಾಗಿದೆ. ಮಂಡ್ಯ, ಹಾಸನ ಹಾಗೂ ತುಮಕೂರಿನಲ್ಲಿ ನಾವೇ ಗೆಲ್ಲುತ್ತೇವೆ. ಮೈತ್ರಿ ಅಭ್ಯರ್ಥಿಗಳೆಲ್ಲರಿಗೂ ಗೆಲುವು ನಿಶ್ಚಿತ ಎಂದು ಹೇಳಿದ್ದಾರೆ.
ಬಿ.ಎಸ್. ಯಡಿಯೂರಪ್ಪ ಅವರು ಮೊದಲು ಶಿವಮೊಗ್ಗ ನೋಡಿಕೊಳ್ಳಲಿ. ಈಶ್ವರಪ್ಪ ಹಾಗೂ ಯಡಿಯೂರಪ್ಪ ಅವರು ಅಣ್ಣತಮ್ಮಂದಿರ ಹಾಗೇ ಕೆಲಸ ಮಾಡಲಿ ಎಂದು ಟೀಕಿಸಿದ್ದಾರೆ. ರೇವಣ್ಣ ಅವರ ಬೆಂಗಾವಲು ವಾಹನದಲ್ಲಿ ಹಣ ಸಿಕ್ಕಿದ್ದ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಯಿಸಿದ ಅವರು ನಮ್ಮ ಕಾರಿನಲ್ಲಿ ಹಣ ಸಿಕ್ಕಿರುವ ಬಗ್ಗೆ ತನಿಖೆ ನಡೆಸಲಿ ನಾನೇನು ಬೇಡ ಎಂದಿಲ್ಲ. ಇದಕ್ಕೆ ದೇವರೆ ಶಿಕ್ಷೆ ಕೊಡುವ ಕಾಲ ಬರುತ್ತದೆ. ನಾನೇನು ಕಾರಿನಲ್ಲಿ ಹಣವನ್ನು ಇಟ್ಟುಕೊಂಡು ಓಡಾಡಬೇಕಾ? ನಾನು ಬಿ.ಎಸ್. ಯಡಿಯೂರಪ್ಪ ಅವರ ಹಾಗೇ ತರಕಾರಿ ವಾಹನದಲ್ಲಿ ಹಣವನ್ನು ಸಾಗಿಸಿಲ್ಲ. ಅಧಿಕಾರ ದುರುಪಯೋಗಪಡಿಸುವುದು ಎಷ್ಟು ದಿನ ನಡೆಯುತ್ತದೆ? ಅವೆಲ್ಲವೂ ರಿವರ್ಸ್ ಆಗುತ್ತದೆ. ಐಟಿ ದಾಳಿಗೆ ಸಂಬಂಧಿಸಿದಂತೆ ಪ್ರತಿಕ್ರಯಿಸಿದ ಅವರು ಮಂಡ್ಯ ಹಾಗೂ ಹಾಸನದಲ್ಲಿ ಬಿಟ್ಟರೆ ಬೇರೆ ಎಲ್ಲೂ ಐಟಿ ದಾಳಿ ನಡೆದಿಲ್ಲ. ನಾವು ಅಕ್ರಮ ಹಣವನ್ನು ಇಟ್ಟಿದ್ದರೆ ಬಂದು ಹಿಡಿಯಲಿ ನಾವೇನು ಬೇಡ ಎಂದು ಹೇಳಿದ್ದೀವಾ? ಎಂದು ಪ್ರಶ್ನಿಸಿದ್ದಾರೆ.










