ಮಂಗಳೂರು : ಪಂಪ್ವೆಲ್ ಫ್ಲೈಓವರ್ ಬ್ರಿಡ್ಜ್ ಹಳೆ ಗಾಡಿಗೆ ಪೈಂಟ್ ಕೊಟ್ಟಂತೆ ಆಗಿದೆ ನಾನು ನಗರಾಭಿವೃದ್ಧಿ ಸಚಿವನಾಗಿದ್ದ ವೇಳೆ ನಡೆದ ಕಾಮಗಾರಿಯನ್ನು ಒಮ್ಮೆ ನೋಡಿ ಬರಲಿ ಎಂದು ಮಾಜಿ ಸಚಿವ ಯು ಟಿ ಖಾದರ್ ವ್ಯಂಗ್ಯವಾಡಿದ್ದಾರೆ.
ಒಂಬತ್ತುಕೆರೆ ಪ್ರದೇಶದಲ್ಲಿ ನನೆಗುದಿಗೆ ಬಿದ್ದಿರುವ ಮನೆಗಳ ನಿರ್ಮಾಣದ ಕುರಿತು ವಸತಿ ಸಚಿವರು ಕ್ರಮ ಕೈಗೊಳ್ಳಬೇಕು ಎಂದು ಯು.ಟಿ. ಖಾದರ್ ಆಗ್ರಹಿಸಿದ ಅವರುಈ ಪ್ರದೇಶದಲ್ಲಿ ಇರುವ ಮನೆಗಳನ್ನು ನೆಲಸಮಗೊಳಿಸಿ, ಅಲ್ಲಿ ಅಪಾರ್ಟಮೆಂಟ್ ನಿರ್ಮಿಸುವ ಯೋಜನೆ ಸಿದ್ಧವಾಗಿದೆ. ವಸತಿ ಸಚಿವರು ಈ ಬಗ್ಗೆ ಕ್ರಮ ಕೈಗೊಂಡು, ಶಿಲಾನ್ಯಾಸ ನೆರವೇರಿಸಬೇಕು. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಈ ಯೋಜನೆಯ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
390 ಫಲಾನುಭವಿಗಳಿಗೆ ಮನೆಗಳನ್ನು ನಿರ್ಮಿಸುವ ಯೋಜನೆಯನ್ನು 2000ರಲ್ಲಿ ಪ್ರಾರಂಭಿಸಲಾಯಿತು. ವಸತಿ ಯೋಜನೆಯಿಂದ ಒಂಬತ್ತುಕೆರೆ ಕಲುಷಿತಗೊಳಿಸುತ್ತದೆ ಎಂಬ ಆತಂಕದಲ್ಲಿದ್ದ ಸ್ಥಳೀಯರು, ಕೋರ್ಟ್ ಮೊರೆ ಹೋಗಿದ್ದರು. ಈ ಸಂಬಂಧ ತಡೆಯಾಜ್ಞೆ ನೀಡಿದ್ದ ಕೋರ್ಟ್, ಕೆರೆ ಮಾಲಿನ್ಯವನ್ನು ತಡೆಗಟ್ಟಲು ಒಳಚರಂಡಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿತ್ತು. ಅದರಂತೆ ಒಳಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.
ಒಂಬತ್ತುಕೆರೆ ಪ್ರದೇಶದ ಮನೆಗಳ ಸಮಸ್ಯೆಯನ್ನು ಟ್ರೋಲ್ ಮಾಡಿದರೆ ಅಲ್ಲಿ ಮನೆಗಳ ನಿರ್ಮಾಣ ಮಾಡಲು ಸಾಧ್ಯವೇ? ಅದರ ಬದಲು ಯೋಜನೆಯನ್ನು ಪೂರ್ಣಗೊಳಿಸುವಂತೆ ಈ ಭಾಗದ ಬಿಜೆಪಿ ಮುಖಂಡರು ವಸತಿ ಸಚಿವರ ಮೇಲೆ ಒತ್ತಡ ತರಬೇಕು ಎಂದರು.










