ಕೊಟ್ಟಿಗೆಹಾರ : ತರುವೆ ಗ್ರಾ.ಪಂ ವ್ಯಾಪ್ತಿಯ ಚೌಡೇಶ್ವರಿ ದೇವಸ್ಥಾನದ ಸಮೀಪ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಗಾಂಜಾವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೋಲಿಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಳ್ತಂಗಡಿ ತಾಲ್ಲೂಕಿನ ಪುದುವೆಟ್ಟು ಗ್ರಾಮದ ಮುಸ್ತಾಫ, ಚಾರ್ಮಾಡಿ ಗ್ರಾಮದ ಉಮ್ಮರುಲ್ ಫಾರೂಕ್, ಮತ್ತು ಮಹಮ್ಮದ್ ನೌಶದ್ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಂದ ಸುಮಾರು 50 ಸಾವಿರ ಮೌಲ್ಯದ 2 ಕೆ.ಜಿ ಗಾಂಜಾ, ಅಕ್ರಮವಾಗಿ ಗಾಂಜಾವನ್ನು ಮಾರಾಟ ಮಾಡಲು ಬಳಸುತ್ತಿದ್ದ ಸ್ಕೂಟರ್ನ್ನು ಪೋಲಿಸರು ವಶ ಪಡಿಸಿಕೊಂಡಿದ್ದಾರೆ. ಆರೋಪಿಗಳು ಗಾಂಜಾವನ್ನು ಕಾಸರಗೋಡು ಬಳಿಯ ಮೇಪದವು ಎಂಬಲ್ಲಿ ರಹೀಂ ಎಂಬುವನಿಂದ ಖರೀದಿಸಿ ತಂದು ಹೆಚ್ಚಿನ ಹಣಕ್ಕೆ ಮಾರಾಟ ಮಾಡುತ್ತಿದ್ದರು.
ಪೋಲಿಸ್ ಅಧೀಕ್ಷಕ ಅಕ್ಷಯ್ ಎಂ.ಹೆಚ್, ಹೆಚ್ಚುವರಿ ಪೋಲಿಸ್ ಅಧೀಕ್ಷಕರಾದ ಶೃತಿ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಚರಣೆಯಲ್ಲಿ ಸಿಇಎನ್ ಪೋಲಿಸ್ ಠಾಣೆಯ ಪೋಲಿಸ್ ಉಪ ನಿರೀಕ್ಷಕರಾದ ರಮ್ಯ ಎನ್.ಕೆ, ಸಿಬ್ಬಂದಿಗಳಾದ ಲೋಕೇಶ್, ಇಮ್ರಾನ್ ಖಾನ್, ಮುಖ್ರಿಂಬೇಗ್, ಮಹೇಶ್, ಅನ್ವರ್ ಪಾಷಾ, ಹರೀಶ್, ಚಾಲಕರಾದ ಪೂರ್ಣೆಶ್, ರವಿ, ಜಿಲ್ಲಾ ಅಬಕಾರಿ ಉಪಾಧೀಕ್ಷಕರಾದ ಪ್ರದೀಪ್, ಅಬಕಾರಿ ಇಲಾಖೆಯ ಸಿಬ್ಬಂದಿ ಖಾಂಡ್ಯನಾಯ್ಕ, ಮಂಜುನಾಥ್ ಭಾಗವಹಿಸಿದ್ದರು.










