ಬಳ್ಳಾರಿ : ತಂಗಿಯ ಶೀಲವನ್ನು ಶಂಕಿಸಿ ಅಣ್ಣನೇ ತನ್ನ ತಂಗಿಯನ್ನು ಮಚ್ಚಿನಿಂದ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಕರಡಿದುರ್ಗ ಗ್ರಾಮದಲ್ಲಿ ನಡೆದಿದೆ. ರತ್ನಮ್ಮ(28) ಕೊಲೆಯಾದ ತಂಗಿ, ಹನುಮಂತಪ್ಪ(34) ಕೊಲೆಗೈದ ಆರೋಪಿ ಅಣ್ಣ ಎಂದು ಗುರುತಿಸಲಾಗಿದೆ. ಅಣ್ಣ ಹನುಮಂತಪ್ಪ ಅವರು ಅ.19ರಂದು ತಂಗಿಯ ಶೀಲವನ್ನು ಶಂಕಿಸಿ ತಂಗಿಯ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ತಂಗಿ ರತ್ನಮ್ಮ ಅವರು ದಾವಣಗೆರೆಯ ಎಸ್.ಎಸ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ತಡರಾತ್ರಿ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದು, ಈ ಕುರಿತು ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.










