ಲವ್ ಜಿಹಾದ್ ಹೆಸರಿನಲ್ಲಿ ಮತಾಂತರ ಮಾಡಲಾಗುತ್ತಿದ್ದು, ರಾಜ್ಯದಲ್ಲಿ ಇದಕ್ಕೆ ಕಡಿವಾಣ ಹಾಕಲಾಗುತ್ತದೆ : ಬಿ.ಎಸ್.ಯಡಿಯೂರಪ್ಪ.

115
firstsuddi

ಮಂಗಳೂರು: ಎರಡು ದಶಕಗಳ ನಂತರ ಬಿಜೆಪಿ ರಾಜ್ಯಕಾರಿಣಿ ಮಂಗಳೂರಿನಲ್ಲಿ ಇಂದು ಬೆಳಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಸಹಿತ ರಾಜ್ಯ ಬಿಜೆಪಿ ನಾಯಕರ ಉಪಸ್ಥಿತಿಯಲ್ಲಿ ಪ್ರಾರಂಭಗೊಂಡಿತು.

ನಗರದ ರಮಣ ಪೈ ಸಭಾಂಗಣದಲ್ಲಿ ಸಭೆ ಬೆಳಗ್ಗೆಯಿಂದ ಸಂಜೆ ವರೆಗೆ ನಡೆಯುತ್ತಿದೆ. ಇದೇ ವೇಳೆ ಪಕ್ಷದ ಕೋರ್ ಕಮಿಟಿ ಸಭೆ ಕೂಡಾ ನಡೆಯಲಿದ್ದು ಹಿರಿಯ ನಾಯಕರು ಪಾಲ್ಗೊಳ್ಳುತ್ತಾರೆ. ಬೆಳಗ್ಗೆ ಕಾರ್ಯಕಾರಿಣಿಯ ಉದ್ಘಾಟನೆಯನ್ನು ಸಿಎಂ ಯಡಿಯೂರಪ್ಪ ನೆರವೇರಿಸಿದರು. ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆ ವಹಿಸಿದ್ದರು.

ಈ ವೇಳೆ ಮಾತನಾಡಿದ ಯಡಿಯೂರಪ್ಪ ಲವ್ ಜಿಹಾದ್ ಹೆಸರಿನಲ್ಲಿ ಮತಾಂತರ ಮಾಡಲಾಗುತ್ತಿದ್ದು ರಾಜ್ಯದಲ್ಲಿ ಇದಕ್ಕೆ ಕಡಿವಾಣ ಹಾಕಲಾಗುತ್ತದೆ. ಯಾರು ಮಾಡುತ್ತಾರೋ, ಬಿಡುತ್ತಾರೊ ಗೊತ್ತಿಲ್ಲ ಸಮಗ್ರವಾಗಿ ಚರ್ಚಿಸಿ ರಾಜ್ಯದಲ್ಲಿ ಇದಕ್ಕೆ ಬಿಗಿ ಕ್ರಮ ಕೈಗೊಳ್ಳಲಾಗುವುದು. ಶಿರಾ, ಮತ್ತು ಆರ್ ಆರ್ ನಗರದಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ ಇದರಿಂದಾಗಿಯೇ ಕಾಂಗ್ರೆಸ್ ನಾಯಕರು ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಚುನಾವಣಾ ಫಲಿತಾಂಶ ಕಾಂಗ್ರೆಸ್ಸಿಗರಿಗೆ ಉತ್ತರ ಸಿಗಲಿದೆ. ಆರ್ ನಗರದಲ್ಲಿ 40 ಸಾವಿರ, ಶಿರಾದಲ್ಲಿ 20 ಸಾವಿರ ಮತಗಳ ಅಂತರದಿಂದ ಬಿಜೆಪಿ ಜಯಗಳಿಸಲಿದೆ. ವಿಧಾನಪರಿಷತ್ ಚುನಾವಣೆಯಲ್ಲೂ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದರು.

2018 ರ‌ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನ ಗೆದ್ದಿತ್ತು.‌ ಕಾಂಗ್ರೆಸ್- ಜೆಡಿಎಸ್ ಮೈತ್ರಿ‌ ಸರ್ಕಾರ ರಚನೆಯಾಗಿತ್ತು. ಆದರೆ, ಆಡಳಿತ ಪಕ್ಷದ 18 ಶಾಸಕರು ರಾಜೀನಾಮೆ ನೀಡಿ, ಬಿಜೆಪಿ‌ ಸೇರಿದರು. 18 ಜನರ ಸಹಕಾರದಿಂದ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ‌ಸಾಧ್ಯವಾಯಿತು. ಬಹುಶಃ ದೇಶದಲ್ಲಿ‌ ಆಡಳಿತ ಪಕ್ಷದ‌ ಇಷ್ಟೊಂದು ಶಾಸಕರು ರಾಜೀನಾಮೆ‌ ನೀಡಿರುವುದು ಇದೇ ಮೊದಲು ಎಂದು ಹೇಳಿದರು.

ಡ್ರಗ್ಸ್ ಮಾಫಿಯಾಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಕಠಿಣ ಕ್ರಮ‌ ಕೈಗೊಂಡಿದೆ. ಡ್ರಗ್ಸ್ ಮುಕ್ತ‌ ರಾಜ್ಯ ಮಾಡುವ‌ ಮೂಲಕ ವಿದ್ಯಾರ್ಥಿಗಳು, ಯುವಜನರು ಸಂಕಷ್ಟಕ್ಕೆ ಸಿಲುಕುವುದನ್ನು ತಪ್ಪಿಸಲಾಗುವುದು ಎಂದರು.

ಕೋವಿಡ್ ನಿಂದ ಆರ್ಥಿಕತೆ ಹದಗೆಟ್ಟಿತ್ತು. ಇದೀಗ ಚೇತರಿಸುತ್ತಿದೆ.‌ ಈಗಾಗಲೇ ಶಾಸಕರ‌ ಅಭಿವೃದ್ಧಿ ನಿಧೊಗೆ ₹50 ಲಕ್ಷ‌ ಬಿಡುಗಡೆ ಮಾಡಲಾಗಿದೆ. ಮಹಾತ್ಮಾ ಗಾಂಧಿ ನಗರ ‌ವಿಕಾಸ ಯೋಜನೆಯಡಿ ಮಂಗಳೂರು‌ ಸೇರಿದಂತೆ ರಾಜ್ಯದ 10 ನಗರಗಳಿಗೆ ತಲಾ ₹50 ಕೋಟಿ‌ ಮಂಜೂರು ಮಾಡಲಾಗಿದೆ. ಈ ಯೋಜನೆಯಡಿ‌ ಪ್ರತಿ ನಗರದ ಅಭಿವೃದ್ಧಿಗೆ ₹125 ಕೋಟಿ ಬಳಸಲು ಅವಕಾಶವಿದೆ ಎಂದು ತಿಳಿಸಿದರು.

ಯಾವುದೇ ಚುನಾವಣೆಯನ್ನು ಕಾರ್ಯಕರ್ತರು ಹಗುರವಾಗಿ ಪರಿಗಣಿಸಬಾರದು.‌ ಗ್ರಾಮ ಪಂಚಾಯಿತಿಯಿಂದ ಲೋಕಸಭೆಯವರೆಗೆ ಎಲ್ಲೆಡೆಯೂ ಪಕ್ಷ‌ ಅಧಿಕಾರಕ್ಕೆ ಬರಬೇಕು. ಅಧಿಕಾರದ ಮೂಲಕ ಜನರ‌ ಕಲ್ಯಾಣ ಮಾಡುವುದಕ್ಕಾಗಿ ಪಕ್ಷದ‌ ಸಂಘಟನೆ ಮಾಡಬೇಕು ಎಂದು ಸಲಹೆ‌ ನೀಡಿದರು.

ಪಕ್ಷ‌ ಸಂಘಟನೆಗೆ‌ ದಕ್ಷಿಣ ಕನ್ನಡ ರಾಜ್ಯಕ್ಕೆ‌ ಮಾದರಿ. ಇದೇ‌ ಮಾದರಿಯಲ್ಲಿ ಪಕ್ಷ‌ ಸಂಘಟಿಸುವ‌ ಮೂಲಕ ಮುಂಬರುವ ‌ವಿಧಾನಸಭೆ ಚುನಾವಣೆಯಲ್ಲಿ ಪಕ್ಷ 140-150 ಸ್ಥಾನ ಗೆಲ್ಲುವಂತಾಗಲಿ.‌ಇದಕ್ಕೆ ನಳಿನ್ ಕುಮಾರ್‌ ನೇತೃತ್ವದಲ್ಲಿ ಎಲ್ಲರೂ ಅಗತ್ಯ ‌ಸಹಕಾರ ನೀಡಬೇಕು ಎಂದು ಹೇಳಿದರು.

ಸಾಗರದ‌ ಅಲೆಗಳಿಂದ ವಿದ್ಯುತ್‌ ಉತ್ಪಾದನೆ ಮಾಡಲು ಸರ್ಕಾರ ಆದ್ಯತೆ ನೀಡಲಿದೆ. ಸಾಗರೋತ್ಪನ್ನಗಳ ‌ಮೌಲ್ಯವರ್ಧನೆ ಮಾಡುವ‌ ಮೂಲಕ ಉದ್ಯೋಗಾವಕಾಶ ಒದಗಿಸಲು ರಾಜ್ಯ‌ ಸರ್ಕಾರ ಕಾರ್ಯಕ್ರಮ ರೂಪಿಸುತ್ತಿದೆ ಎಂದು ತಿಳಿಸಿದರು.

ಪ್ರವಾಸೋದ್ಯಮದ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದ್ದು, ಕಾಮಗಾರಿ ‌ಆರಂಭಿಸಲು ಈಗಾಗಲೇ ಸೂಚನೆ ನೀಡಲಾಗಿದೆ. 6 ತಿಂಗಳಲ್ಲಿ ಬದಲಾವಣೆ‌ ಕಾಣಲಿದೆ ಎಂದರು.

ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಡಿ.ವಿ.ಸದಾನಂದ ಗೌಡ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಸಿ.ಟಿ.ರವಿ, ಜಗದೀಶ್ ಶೆಟ್ಟರ್, ಅರವಿಂದ ಲಿಂಬಾವಳಿ ಮತ್ತಿತರರು ಪಾಲ್ಗೊಂಡರು.