ಮೂಡಿಗೆರೆ : ಜಾವಳಿಯ ನ್ಯಾಯಬೆಲೆ ಅಂಗಡಿಗೆ ಬಂದ ನಾಗರಹಾವು : ಇಲಿಯ ನುಂಗಿ ಹೊರ ಹಾಕಲಾರದೆ ಪರದಾಡಿದ ನಾಗರಹಾವು…

459
firstsuddi

ಕೊಟ್ಟಿಗೆಹಾರ : ಜಾವಳಿಯ ನ್ಯಾಯಬೆಲೆ ಅಂಗಡಿಯ ಗೋದಾಮಿಯಲ್ಲಿ ನಿನ್ನೆ ರಾತ್ರಿ ನಾಗರಹಾವೊಂದು ಕಾಣಸಿಕೊಂಡು ಆತಂಕಕ್ಕೆ ಕಾರಣವಾಯಿತು.
ನಿನ್ನೆ ರಾತ್ರಿ 7 ಗಂಟೆ ಸುಮಾರಿಗೆ ಜಾವಳಿ ನ್ಯಾಯಬೆಲೆ ಅಂಗಡಿಗೆ ಬಂದಿದ್ದ ಪಡಿತರವನ್ನು ವಾಹನದಿಂದ ನ್ಯಾಯಬೆಲೆ ಅಂಗಡಿಯ ಗೋದಾಮಿಗೆ ಇಳಿಸುವ ವೇಳೆ ಸಿಬ್ಬಂದಿಯೊಬ್ಬರು ಗೋದಾಮಿನಲ್ಲಿ ಇಲಿಯೊಂದನ್ನು ನುಂಗಿದ್ದ ನಾಗರಹಾವು ಸಿಬ್ಬಂದಿಯ ಕೈಗೆ ಕಚ್ಚುವುದು ಕೂದಲೆಳೆಯಲ್ಲಿ ತಪ್ಪಿದ್ದು ಗಾಬರಿಗೊಂಡು ನ್ಯಾಯಬೆಲೆ ಅಂಗಡಿಯ ಸಿಬ್ಬಂದಿ ಹೊರ ಬಂದಿದ್ದಾರೆ.
ಗೋದಾಮಿನೊಳಗೆ ಹೋಗಲು ಭಯವಾಗಿ ಹೊರಗೆ ನಿಂತ ಸಿಬ್ಬಂದಿ ಕೂಡಲೆ ಬಣಕಲ್‍ನ ಉರಗ ಪ್ರೇಮಿ ಆರೀಪ್ ಅವರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಬಂದ ಸ್ನೇಕ್ ಆರೀಪ್ ನ್ಯಾಯಬೆಲೆ ಅಂಗಡಿಯ ಗೋದಾಮಿನಲ್ಲಿ ಪಡಿತರ ಮೂಟೆಗಳ ನಡುವೆ ಅಡಗಿದ್ದ ಸುಮಾರು 10 ಅಡಿ ಉದ್ದದ ನಾಗರಹಾವನ್ನು ಹಿಡಿದು ಗೋದಾಮಿನಿಂದ ಹೊರ ತಂದಿದ್ದಾರೆ. ಇಲಿಯನ್ನು ನುಂಗಿದ ನಾಗರಹಾವು ತೆವಳಲು ಸಾಧ್ಯವಾಗದೆ ಇಲಿಯನ್ನು ಹೊರ ಹಾಕಲು ಪರದಾಡಿ ನಿಧಾನಕ್ಕೆ ಇಲಿಯನ್ನು ಹೊರ ಹಾಕಿತು.
ನಂತರ ಉಪವಲಯ ಅರಣ್ಯಾಧಿಕಾರಿ ಯಾಸಿನ್ ಅವರ ಸಮ್ಮುಖದಲ್ಲಿ ನಾಗರಹಾವನ್ನು ಚಾರ್ಮಾಡಿ ಘಾಟ್ ಅರಣ್ಯಕ್ಕೆ ಬಿಟ್ಟರು.

ವಿಷಜಂತುಗಳ ಆವಾಸವಾದ ನ್ಯಾಯಬೆಲೆ ಅಂಗಡಿ

ಜಾವಳಿ ನ್ಯಾಯಬೆಲೆ ಅಂಗಡಿಯ ಗೋಡೆಗಳು ಕೆಲವೆಡೆ ತೂತು ಬಿದಿದ್ದು ಇಲಿ, ಹಾವುಗಳ ಆವಾಸಸ್ಥಾನವಾಗಿದೆ. ನ್ಯಾಯಬೆಲೆ ಅಂಗಡಿಯ ಗೋದಾಮು ಕಟ್ಟಡವನ್ನು ದುರಸ್ಥಿ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.