ಮೂಡಿಗೆರೆ : ಅಕಾಲಿಕ ಮಳೆಗೆ ಮೊಳಕೆಯೊಡೆದ ಭತ್ತದ ತೆನೆ, ಕಾಫಿಹಣ್ಣು ನೆಲದ ಪಾಲು…

297
firstsuddi

ಮೂಡಿಗೆರೆ : ಕಳೆದ ಕೆಲ ದಿನಗಳಿಂದ ತಾಲ್ಲೂಕಿನ ಸುತ್ತಮುತ್ತ ಸುರಿಯುತ್ತಿರುವ ಮಳೆಯಿಂದಾಗಿ ಭತ್ತದ ಗದ್ದೆಗಳಲ್ಲಿ ಕುಯ್ಲು ಮಾಡಿ ಇಟ್ಟಿದ್ದ ಭತ್ತದ ತೆನೆಗಳು ಮೊಳಕೆಯೊಡಿದಿದ್ದು, ಕಾಫಿತೋಟಗಳಲ್ಲಿ ಗಿಡದಿಂದ ಕಾಫಿಹಣ್ಣುಗಳು ಕೆಳಗುರುಳುತ್ತಿವೆ.

ಅತ್ತಿಗೆರೆ, ಬಿನ್ನಡಿ, ಬಣಕಲ್, ದಾರದಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಭತ್ತದ ಕುಯ್ಲು ಮಾಡಲಾಗಿದ್ದು, ಮಳೆಯಿಂದಾಗಿ ಭತ್ತದ ಪೈರನ್ನು ಗದ್ದೆಯಲ್ಲಿಯೆ ಬಿಟ್ಟ ಪರಿಣಾಮ ಭತ್ತದ ಕಾಳುಗಳು ಮೊಳಕೆಯೊಡೆದಿವೆ. ಭತ್ತದ ಕಾಳುಗಳು ಮೊಳಕೆಯೊಡೆದಿರುವುದರಿಂದ ಕ್ರಮೇಣ ಕೊಳಯತೊಡಗಿರುವುದರಿಂದ ಭತ್ತದ ಕಾಳುಗಳು ಕಹಿಯಾಗುತ್ತವೆ. ಇದರಿಂದಾಗಿ ಭತ್ತ ಪ್ರಯೋಜನಕ್ಕೆ ಬಾರದಂತಾಗುತ್ತದೆ. ಮಳೆ ಇಲ್ಲದಿದ್ದರೆ ಒಕ್ಕಲಾಟ ಮಾಡಿ ಭತ್ತ ಹಾಗೂ ಹುಲ್ಲನ್ನು ಬೇರ್ಪಡಿಸುತ್ತಿದ್ದ ರೈತರು ಪೈರು ನೆನೆದಿರುವ ಕಾರಣ ಬಹುತೇಕ ರೈತರು ಗದ್ದೆಯಲ್ಲಿ ಭತ್ತರ ಪೈರನ್ನು ಬಡಿಯುವ ಮೂಲಕ ಹುಲ್ಲಿನಿಂದ ಭತ್ತದ ಕಾಳನ್ನು ಬೇರ್ಪಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅತ್ತಿಗೆರೆಯ ರೈತರಾದ ಭಕ್ತೇಶ್ ಅವರು, ಶ್ರಮ ಪಟ್ಟು ನಾಟಿ ಮಾಡಿ ಭತ್ತ ಕುಯ್ಲಿಗೆ ಬರುವ ವೇಳೆಗೆ ಮಳೆ ಬಂದು ಭತ್ತ ಮಣ್ಣು ಪಾಲಾಗಿದೆ. ಅತಿಯಾದ ಮಳೆಯಿಂದ ತೆನೆಯಲ್ಲಿಯೆ ಭತ್ತದ ಕಾಳುಗಳು ಮೊಳಕೆಯೊಡೆಯುತ್ತಿವೆ. ಸರ್ಕಾರ ರೈತರ ನೆರೆವಿಗೆ ದಾವಿಸಬೇಕು ಎಂದರು.
ಕಾಫಿತೋಟಗಳಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಗಿಡದಲ್ಲಿರುವ ಕಾಫಿಹಣ್ಣುಗಳು ಉದುರುತ್ತಿದ್ದು, ಕಾಫಿ ಬೆಳೆಗಾರರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ರಾಶಿ ರಾಶಿಯಾಗಿ ಉದುರಿಸುವ ಕಾಫಿಹಣ್ಣುಗಳು ಅಸಹಾಯಕರಾಗಿ ಕಾಫಿ ಬೆಳೆಗಾರರು ನೋಡುವಂತಾಗಿದೆ.

ಭತ್ತದ ಗದ್ದೆಗಳಿಗೆ ಕೃಷಿ ಅಧಿಕಾರಿಗಳ ಭೇಟಿ

ಬಣಕಲ್, ತರುವೆ, ಬಿನ್ನಡಿ, ಅತ್ತಿಗೆರೆ ಗ್ರಾಮಗಳ ಭತ್ತದ ಗದ್ದೆಗಳಿಗೆ ಬಣಕಲ್ ಕೃಷಿ ಇಲಾಖೆಯ ತಾಂತ್ರಿಕ ವ್ಯವಸ್ಥಾಪಕರಾದ ಶ್ವೇತಾ ಅವರರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಇಲಾಖೆಯ ಮೇಲಾಧಿಕಾರಿಗಳ ಸೂಚನೆಯಂತೆ ಭತ್ತದ ಗದ್ದೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದ್ದು, ಮೇಲಾಧಿಕಾರಿಗಳಿಗೆ ಈ ಬಗ್ಗೆ ವರದಿ ನೀಡಲಾಗುವುದು ಎಂದು ತಿಳಿಸಿದ್ದರು. ಈ ಸಂದರ್ಭದಲ್ಲಿ ಬಣಕಲ್ ಕೃಷಿ ಇಲಾಖೆಯ ಲೆಕ್ಕ ಸಹಾಯಕರಾದ ಶೈಲಜಾ ಇದ್ದರು.
‘ಬಳಿಕ ಮಾತನಾಡಿದ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರು, ತರಿ ಜಮೀನಿನ ಬೆಳೆ ನಾಶದ ಬಗ್ಗೆ ಪರಿಹಾರ ನೀಡಲು ಸಮೀಕ್ಷೆ ನಡೆಸಲಾಗುತ್ತಿದ್ದು, ಬೆಳೆ ಹಾನಿಯಾದ ರೈತರು ತಾಲ್ಲೂಕು ಕಚೇರಿಯಲ್ಲಿ ಬೆಳೆ ಹಾನಿ ಪರಿಹಾರ ಅರ್ಜಿ ಸಲ್ಲಿಬಹುದಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಅವರೊಂದಿಗೆ ಮಾತುಕತೆ ನಡೆಸಿದ್ದು ಸಕರಾತ್ಮಕವಾಗಿ ಸ್ಪಂಧಿಸಿದ್ದಾರೆ’ ಎಂದರು.