ಸಾರಿಗೆ ನೌಕರರ ಮುಷ್ಕರ ಮೂರನೇ ದಿನವೂ ಮುಂದುವರೆದಿದ್ದು, ಪ್ರಯಾಣಕ್ಕೆ ಬಸ್ಸನ್ನೇ ನಂಬಿಕೊಂಡಿರುವ ಜನಸಾಮಾನ್ಯರ ಸ್ಥಿತಿ ದುಸ್ತರವಾಗಿದೆ. ಸಾರಿಗೆ ನೌಕರರು ಇಂದು ಕೂಡ ಕರ್ತವ್ಯಕ್ಕೆ ಹಾಜರಾಗದೆ ಬಿಗಿಪಟ್ಟು ಹಿಡಿದು ಕುಳಿತಿದ್ದಾರೆ. ಕರ್ತವ್ಯಕ್ಕೆ ಹಾಜರಾಗುವಂತೆ ಅಧಿಕಾರಿಗಳು ನೊಟೀಸ್ ನೀಡಿದ್ದು, ಸಿಬ್ಬಂದಿ ಅದಕ್ಕೆ ಡೋಂಟ್ ಕೇರ್ ಅಂತಿಲ್ಲ. ಈ ಮಧ್ಯೆ ಪ್ರಯಾಣಿಕರು ಸಾರಿಗೆ ಬಸ್ಸುಗಳಿಲ್ಲದೇ ಪರದಾಡುತ್ತಿದ್ದಾರೆ.
ಸಾರಿಗೆ ಮುಷ್ಕರದ ನಡುವೆಯೂ ಸರ್ಕಾರ ನೈಟ್ ಕರ್ಫ್ಯೂ ಜಾರಿ ಮಾಡಿದೆ. ನಿನ್ನೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದ 11 ರಾಜ್ಯಗಳ ಸಿಎಂಗಳ ಸಭೆಯ ಬಳಿಕ ರಾಜ್ಯದಲ್ಲಿ ಮತ್ತೆ ನೈಟ್ ಕರ್ಫ್ಯೂ ಜಾರಿಗೊಳಿಸಿ ಸಿಎಂ ಯಡಿಯೂರಪ್ಪನವರು ಘೋಷಣೆ ಮಾಡಿದ್ದಾರೆ. ಏಪ್ರಿಲ್ 10ರಿಂದ ಏಪ್ರಿಲ್ 20ರವರೆಗೆ ರಾಜ್ಯದ 8 ನಗರಗಳಲ್ಲಿ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ಬೆಂಗಳೂರು ನಗರ, ಮಂಗಳೂರು, ಉಡುಪಿ, ಮಣಿಪಾಲ್, ತುಮಕೂರು, ಬೀದರ್, ಕಲಬುರಗಿ, ಮೈಸೂರು ನಗರದಲ್ಲಿ ನೈಟ್ ಕರ್ಫ್ಯೂ ಹೇರಲಾಗಿದೆ. ಅಲ್ಲದೇ ಶನಿವಾರದಿಂದ ಸತತ 4 ದಿನ ಸಾಲು ಸಾಲು ರಜೆ ಇರುವುದರಿಂದ ಯುಗಾದಿ ಹಬ್ಬಕ್ಕೆ ಊರಿಗೆ ಹೋಗುವ ಜನರಿಗೆ ಇನ್ನಷ್ಟು ಸಂಕಷ್ಟ ಎದುರಾಗಿದೆ.










