ಬೆಳಗಾವಿ: ವಿಧಾನಸಭೆಯಲ್ಲಿ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ವಿಧೇಯಕದ ಮೇಲಿನ ಚರ್ಚೆಗೆ ಉತ್ತರ ನೀಡುವ ವೇಳೆ ಆರೋಗ್ಯ ಸಚಿವ ರಮೇಶ್ ಕುಮಾರ್ ವೈದ್ಯಕೀಯ ಸಂಹಿತೆ ಮತ್ತು ಖಾಸಗಿ ಆಸ್ಪತ್ರೆಗಳು ಪಾಲಿಸಬೇಕಾದ ನೈತಿಕ ನಿಯಮಗಳ ಬಗ್ಗೆ ಮಾತನಾಡಿದರು. ಜತೆಗೆ, ವಿಧೇಯಕರ ಕೆಲವೊಂದು ವಿವರಗಳನ್ನು ಒದಗಿಸಿದರು.
ರೋಗಿ ಮೃತಪಟ್ಟರೆ ಬಾಕಿ ಹಣ ಪಾವತಿಗೆ ಒತ್ತಡ ಹೇರದೆ ತಕ್ಷ ಣ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಬೇಕು. ಇದು ಬಿಪಿಎಲ್, ಎಪಿಎಲ್ ಸೇರಿ ಎಲ್ಲ ವರ್ಗದವರಿಗೂ ಅನ್ವಯವಾಗುತ್ತದೆ. ಬಿಪಿಎಲ್ನವರ ಸಂಪೂರ್ಣ ಹಣವನ್ನು ಸರಕಾರ ಭರಿಸುತ್ತದೆ. ಎಪಿಎಲ್ನವರಿಗೆ ಶೇ. 30ರಷ್ಟು ವೆಚ್ಚ ನೀಡಲಾಗುತ್ತದೆ. ಅದಕ್ಕಾಗಿ ಯೂನಿವರ್ಸಲ್ ಹೆಲ್ತ್ ಸ್ಕೀಮ್ ತರಲಾಗುತ್ತಿದೆ. ಆಸ್ಪತ್ರೆಗಳಲ್ಲಿ ರೋಗಿಗಳ ಸನ್ನದು ಕಡ್ಡಾಯವಾಗಲಿದೆ.
ವೈದ್ಯ ಸಂಸ್ಥೆಗಳ ನೋಂದಣಿ ಮತ್ತು ನವೀಕರಣಕ್ಕೆ ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ರಚಿಸಲಾಗುತ್ತದೆ. ಅಹವಾಲು ಸಂಬಂಧವೂ ಜಿಲ್ಲಾಧಿಕಾರಿ ಅಧ್ಯಕ್ಷ ತೆಯ ಪ್ರತ್ಯೇಕ ಪ್ರಾಧಿಕಾರವಿರುತ್ತದೆ. ರೋಗಿಗಳಿಂದ ಹೆಚ್ಚಿನ ಬಿಲ್ ಪಾವತಿಸಿಕೊಂಡರೆ ದಂಡ ಹಾಕಲಾಗುತ್ತದೆ. ನಕಲಿ ವೈದ್ಯ ಸಂಸ್ಥೆ ನಡೆಸುವವರನ್ನು ಜೈಲು ಶಿಕ್ಷೆಗೆ ಗುರಿ ಪಡಿಸುವ ಹಾಗೂ ದಂಡ ವಿಧಿಸುವುದನ್ನು ಹಳೆಯ ಕಾಯಿದೆಯಲ್ಲಿ ಇರುವಂತೆ ಮುಂದುವರಿಸಲಾಗಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ಸರಕಾರ ದರ ನಿಗದಿ ಮಾಡುವುದಿಲ್ಲ. ಬದಲಾಗಿ ಖಾಸಗಿ, ಸರಕಾರದ ಪ್ರತಿನಿಧಿಗಳು, ಸ್ವತಂತ್ರ ವ್ಯಕ್ತಿಗಳು ಹಾಗೂ ತಜ್ಞರು ಸಮಾಲೋಚಿಸಿ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ. ಅದನ್ನು ಆಧರಿಸಿ ಸರಕಾರ ಅಧಿಸೂಚನೆ ಹೊರಡಿಸಲಿದೆ. ವಿಧೇಯಕದ ಮೇಲಿನ ಚರ್ಚೆಯಲ್ಲಿ ಪ್ರತಿಪಕ್ಷ ದ ನಾಯಕ ಜಗದೀಶ ಶೆಟ್ಟರ್, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ, ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಎಚ್.ಕೆ. ಕುಮಾರಸ್ವಾಮಿ, ಕೆ.ಎಸ್. ಪುಟ್ಟಣ್ಣಯ್ಯ, ಸಿ.ಟಿ. ರವಿ, ಎಚ್.ಎಸ್. ಪ್ರಕಾಶ್, ಡಿ.ಎನ್. ಜೀವರಾಜ್, ಎ.ಎಸ್.ಪಾಟೀಲ್ ನಡಹಳ್ಳಿ, ಡಾ. ಶಿವರಾಜ್ ಪಾಟೀಲ್, ರವಿ ಸುಬ್ರಹ್ಮಣ್ಯ ಇನ್ನಿತರರಿದ್ದರು.










