ಮಗಳ ಸಾವಿನಿಂದ ಮನನೊಂದು ಅಳಿಯನ ಮನೆ ಮುಂದೆ ತಂದೆ ನೇಣಿಗೆ ಶರಣು…

61
firstsuddi

ಹಾಸನ : ಮಗಳ ಸಾವಿನಿಂದ ಮನನೊಂದು ತಂದೆ ನೇಣಿಗೆ ಶರಣಾದ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಮಾಳೆಗೆರೆ ಗ್ರಾಮದಲ್ಲಿ ನಡೆದಿದೆ.

ಅಳಿಯನ ಮನೆ ಮುಂದೆ ತಂದೆ ನಾಗರಾಜ್(55) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮಗಳು ಇಷ್ಟಪಡುತ್ತಿದ್ದ ಆಹಾರ ಪದಾರ್ಥಗಳನ್ನು ಮನೆ ಬಾಗಿಲಲ್ಲಿ ಎಡೆಯಿಟ್ಟು ಬಾಗಿಲಿನಲ್ಲೇ ನೇಣುಬಿಗಿದುಕೊಂಡು ನಾಗರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಳಿಯ ಪ್ರವೀಣ್, ಬೀಗರಾದ ಭದ್ರಮ್ಮ ಅವರ ಸಂಬಂಧಿ ವಿರುದ್ದ ಮಾನಸಿಕ ಕಿರುಕುಳ ಆರೋಪ ಕೇಳಿ ಬಂದಿದೆ.

ವರ್ಷದ ಹಿಂದೆ ನಾಗರಾಜ್ ಪುತ್ರಿ ಹೇಮಶ್ರಿಯನ್ನು ಮಾಳೆಗೆರೆಯ ಪ್ರವೀಣ್ ಗೆ ವಿವಾಹ ಮಾಡಿಕೊಡಲಾಗಿತ್ತು. ಮಗಳು ಗರ್ಭಿಣಿಯಾದ ವೇಳೆ ಮಗಳ ಗರ್ಭಪಾತಕ್ಕೆ ಯತ್ನಿಸಲಾಗಿದೆ ಎಂದು ಮೃತ ನಾಗರಾಜ್ ಕುಟುಂಬ ಆರೋಪಿಸಿದೆ. ಮಗಳಿಗೆ ಕಿರುಕುಳ ನೀಡಿದ್ದರಿಂದ ಆಕೆ ಹೆರಿಗೆ ವೇಳೆಯಲ್ಲಿ ಮೃತಪಟ್ಟಿದ್ದಾಳೆ ಎಂದು ದೂರು ನೀಡಲಾಗಿದೆ. ಸಾವಿನ ಬಳಿಕ ಮಗಳ ಕಾರ್ಯಗಳನ್ನು ಸರಿಯಾಗಿ ಮಾಡಿಲ್ಲ ಎಂದು ನಾಗರಾಜ್ ಮನನೊಂದಿದ್ದರು. ಜೊತೆಗೆ ಅಳಿಯ ಪಡೆದಿದ್ದ ಎರಡು ಲಕ್ಷ ಸಾಲ ಹಿಂದಿರುಗಿಸದೆ ಸತಾಯಿಸುತ್ತಿದ್ದರಿಂದ ಬೇಸತ್ತಿದ್ದರು.

ನಿನ್ನೆ ಹಾಡ ಹಗಲೇ ಅಳಿಯನ ಮನೆ ಮುಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ ಸೆಲ್ಫಿ ವಿಡಿಯೋ ಮಾಡಿ ಅಳಿಯ, ಆತನ ತಾಯಿ ಹಾಗು ಸಂಬಂಧಿಕರ ಬಗ್ಗೆ ಆರೋಪ ಮಾಡಿದ್ದಾರೆ. ಮೂವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿ ಮಗಳಿಗೆ ಎಡೆ ಇಟ್ಟು ನಾಗರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.