ಬೆಂಗಳೂರು : ಅಪಾರ್ಟ್ಮೆಂಟ್ನ 14ನೇ ಮಹಡಿಯಿಂದ ಹಾರಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ನಿನ್ನೆ ನಗರದಲ್ಲಿ ನಡೆದಿದೆ.
ನಗರದ ನಾಗವಾರ ಬಳಿಯ ಖಾಸಗಿ ಅಪಾರ್ಟ್ಮೆಂಟ್ ನಲ್ಲಿ ಮೋಹಿನ್ ಎಂಬಾತ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೋಹಿನ್ ಖಾಸಗಿ ಸ್ಕೂಲ್ ನಲ್ಲಿ ಎಸ್ಎಸ್ಎಲ್ ಸಿ ಓದುತ್ತಿದ್ದ. ಪರೀಕ್ಷೆ ನಡೆಯುತ್ತಿದ್ದ ವೇಳೆ ಕಾಪಿ ಹೊಡೆಯುತ್ತಿದ್ದ ಮೋಹಿನ್ ಅನ್ನು ಕಂಡ ಶಿಕ್ಷಕರು ತರಗತಿಯಿಂದ ಹೊರಹಾಕಿದ್ದರು. ಘಟನೆಯಿಂದ ಮನನೊಂದ ಮೋಹಿನ್ ಸಂಜೆ ಐದು ಗಂಟೆ ವೇಳೆಗೆ ಖಾಸಗಿ ಅಪಾರ್ಟ್ಮೆಂಟ್ನ ಹದಿನಾಲ್ಕನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪೋಷಕರು ನೀಡಿರುವ ದೂರಿನ್ವಯ ಶಾಲೆಯ ಶಿಕ್ಷಕರನ್ನು ವಿಚಾರಣೆ ನಡೆಸಿದ ಪೊಲೀಸರು ಐಪಿಸಿ ಸೆಕ್ಷನ್ 306 ರ ಅಡಿಯಲ್ಲಿ ಟೀಚರ್ ವಿರುದ್ಧ ಸಂಪಿಗೆಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ಕ್ಲಾಸ್ ಟೀಚರ್, ಅಪಾರ್ಟ್ಮೆಂಟ್ನ ಭದ್ರತಾ ಸಿಬ್ಬಂದಿ ಸೇರಿದಂತೆ ಘಟನೆಯ ಬಗ್ಗೆ ಪ್ರತ್ಯಕ್ಷದರ್ಶಿಗಳಿಂದ ಪೊಲೀಸರು ಮಾಹಿತಿ ಕಲೆ ಹಾಕಿದರು. ವಿಚಾರಣೆ ವೇಳೆ ವಿದ್ಯಾರ್ಥಿಯನ್ನು ಕೊಠಡಿಯ ಮುಂಭಾಗ ನಿಲ್ಲಿಸಿದ್ದ ಶಿಕ್ಷಕಿ ಶಾಲೆಯಿಂದ ಹೊರಗೆ ವಿದ್ಯಾರ್ಥಿಯನ್ನು ಕಳುಹಿಸಿರಲಿಲ್ಲ. ಆದರೆ ಸ್ವಲ್ಪ ಹೊತ್ತಿನ ಬಳಿಕ ಟೀಚರ್ ಕೊಠಡಿಯ ಹೊರಬಂದು ನೋಡಿದಾಗ ಆತ ಇರಲಿಲ್ಲ. ಆಗ ಶಾಲಾ ಶಿಕ್ಷಕರು ಸಂಪೂರ್ಣ ಶಾಲೆಯನ್ನು ಹುಡುಕಾಡಿದ್ದರು. ವಿದ್ಯಾರ್ಥಿ ಕಾಣದಿದ್ದಾಗ ತಕ್ಷಣವೇ ಅವರ ಪೋಷಕರಿಗೆ ಮಾಹಿತಿ ನೀಡಿದರು.
ಮೋಹಿನ್ ಮನೆಯಿರುವುದು ಅಪಾರ್ಟ್ಮೆಂಟ್ನ ಮುಂಭಾಗದ ರಸ್ತೆಯ ಬದಿಯಲ್ಲಾಗಿದೆ. ಅಪಾರ್ಟ್ಮೆಂಟ್ ಗೆ ಅಪರಿಚಿತ ಎಂಟ್ರಿ ಇಲ್ಲ, ಆದ್ರೂ ಹೇಗೆ ಅಪಾರ್ಟ್ಮೆಂಟ್ನ ಟೆರೇಸ್ ಗೆ ಮೋಹಿನ್ ಹೋದ ಎಂಬುದರ ಬಗ್ಗೆ ಪ್ರಶ್ನೆ ಇತ್ತು. ಇದೀಗ ಪೊಲೀಸರ ತನಿಖೆ ವೇಳೆ ಬಯಲಾಗಿದೆ. ಮೋಹಿನ್ ಅಪಾರ್ಟ್ಮೆಂಟ್ ಗೆ ಹೋಗುವಾಗ ಅದೇ ಅಪಾರ್ಟ್ಮೆಂಟ್ ವಿದ್ಯಾರ್ಥಿಯ ಜೊತೆಗೆ ಒಳ ಹೋಗಿದ್ದ. ಆದ್ರೆ ಆ ಅಪಾರ್ಟ್ಮೆಂಟ್ನ ವಿದ್ಯಾರ್ಥಿಗೂ ಮೋಹಿನ್ ಪರಿಚಯವಿರಲಿಲ್ಲ. ಇನ್ನೊಬ್ಬ ವಿದ್ಯಾರ್ಥಿಯೊಂದಿಗೆ ಈತ ಅಪಾರ್ಟ್ಮೆಂಟ್ ಗೆ ಹೋಗಿದ್ದರಿಂದ ಸೆಕ್ಯೂರಿಟಿ ಗೂ ಡೌಟ್ ಬರಲಿಲ್ಲ. ಮೋಹಿನ್ ಸಮವಸ್ತ್ರ ಧರಿಸಿದ್ದರಿಂದ ಸೆಕ್ಯೂರಿಟಿಗೆ ಗೊಂದಲ ಆಗಿತ್ತೆಂದು ಸೆಕ್ಯೂರಿಟಿ ತನಿಖೆ ವೇಳೆ ಮಾಹಿತಿ ನೀಡಿದ್ದಾರೆ.










