ಉತ್ತರ ಕನ್ನಡ: ಮನೆಯ ಮುಂದೆ ಆಟವಾಡುತ್ತಿದ್ದಾಗ ಆಯತಪ್ಪಿ ಬಾವಿಗೆ ಬಿದ್ದು ಮೂರು ವರ್ಷದ ಮಗು ಸಾವನ್ನಪ್ಪಿದ ಘಟನೆ ಜಿಲ್ಲೆಯ ಕಾರವಾರದ ಹರಿದೇವನಗರದಲ್ಲಿ ನಡದಿದೆ.
ಮೃತ ಮಗುವನ್ನು ಸ್ಥುತಿ (3) ಎಂದು ಗುರುತಿಸಲಾಗಿದೆ. ಬಾಲಕಿ ಆಟವಾಡುತ್ತಾ ಗಣಪತಿ ಮೂರ್ತಿ ಎಂದುಕೊಂಡು ಬಾವಿಗೆ ಮಣ್ಣುಹಾಕಲು ಮುಂದಾಗಿದ್ದಾಳೆ. ಈ ವೇಳೆ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾಳೆ.
ಇತ್ತ ಮಧ್ಯಾಹ್ನವಾದರೂ ಮಗು ಮನೆಗೆ ಬಾರದ ಹಿನ್ನೆಲೆಯಲ್ಲಿ ಪೋಷಕರು ಮಗುವಿಗಾಗಿ ಹುಡುಕಾಟ ನಡೆಸಿದ್ದಾರೆ. ಇನ್ನು ಬಡಾವಣೆಯ ಎಲ್ಲಾ ನಿವಾಸಿಗಳು ಎಲ್ಲೆಡೆ ಹುಡುಕಾಡಿದರೂ ಮಗು ಸಿಗದಿದ್ದಾಗ ಬಾವಿಯಲ್ಲಿ ಇಣುಕಿ ನೋಡಿದ್ದಾರೆ. ಆಗ ಬಾವಿಯಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ.
ಕುಟುಂಬ ಸದಸ್ಯರ ಹಾಗೂ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಕುರಿತು ಕಾರವಾರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.










